Chikkaballapura : ತಾಯಿ ಮಕ್ಕಳ ಸಾವಿನ ಹಿಂದಿದ್ಯಾ ಬಲವಾದ ಕಾರಣ?

CHIKKABALLAPURA : ಕೆರೆಯಲ್ಲಿ ತೇಲುತ್ತಿರೋ ಹೆಂಡ್ತಿ, ಮುದ್ದಾದ ಹೆಣ್ಣು ಮಕ್ಕಳ ಮೃತದೇಹ, ಅಯ್ಯೋ ನನ್ನ ಬಿಟ್ಟು ಹೊರಟು ಹೋದ್ಯಾ, ನೀನು ಹೋದ ಮೇಲೆ ನಾನ್ಯಾಕೆ ಬದುಕಬೇಕು ಅಂತಾ ಬಿದ್ದು ಗೋಳಾಡುತ್ತಿರುವ ಗಂಡ, ಕೆರೆಯ ಸುತ್ತಲು ಜಮಾಯಿಸಿ ತಾಯಿ- ಮಕ್ಕಳ ಸಾವು, ಗಂಡ ಗೋಳಾಟ ಕಣ್ಣೀರಾಕಿದ ಜನರು. ಇವೆಲ್ಲಾ ಕರುಣಾಜನಕ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಧಾಮನ ಕೆರೆಯಲ್ಲಿ.

ಇಬ್ಬರು ಚಿನ್ನದಂಥಹ ಹೆಣ್ಣುಮಕ್ಕಳು, ಹೆಂಡತಿ ಮಕ್ಕಳನ್ನೇ ಪ್ರಪಂಚ ಮಾಡಿಕೊಂಡಿದ್ದ ಗಂಡ, ಸ್ವರ್ಗದಂಥ ಕುಟುಂಬ ಮಕ್ಕಳ ಸ್ಕೂಲ್‌ನಲ್ಲಿ ಪೇರೆಂಟ್ಸ್‌ ಮೀಟಿಂಗ್ ಇದೆ ಅಂತ ಗಂಡ- ಹೆಂಡತಿ ಇಬ್ಬರು ಮಕ್ಕಳೊಂದಿಗೆ ಪೇರೆಂಟ್ಸ್ ಮೀಟಿಂಗ್ ಅಟೆಂಡ್ ಮಾಡಿ, ಮನೆಗೆ ವಾಪಸ್‌ ಆಗಿದ್ರು. ಹೆಂಡತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ತೋಟಕ್ಕೆ ಹೋಗಿದ್ದಾನೆ ಅಷ್ಟೇ. ಅದೇನಾಯಿತೋ ಗೊತ್ತಿಲ್ಲ  ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಶವವಾಗಿ ಕೆರೆಯಲ್ಲಿ  ಪತ್ತೆಯಾಗಿದ್ದಾಳೆ. ಹೆಂಡ್ತಿ ಮಕ್ಕಳ ಶವ ಕಂಡು ಗಂಡನ ಆಕ್ರಂದನ ಮುಗಿಲು ಮುಟ್ಟಿತ್ತು. ಇಷ್ಟಕ್ಕೂ ಹೀಗೆ ಶವಗಳಾಗಿ ಪತ್ತೆಯಾಗಿರುವ ತಾಯಿ- ಮಕ್ಕಳು ಚಿಕ್ಕಬಳ್ಳಾಪುರದ ಬೋದಗಾನಹಳ್ಳಿ ಗ್ರಾಮದವರು.

ಬೋದಗಾನಹಳ್ಳಿ ಗ್ರಾಮದಲ್ಲಿ ಗಂಡ ಜಯಂತ್‌, ಹೆಂಡ್ತಿ ಲಾವಣ್ಯ ವಾಸವಾಗಿದ್ರು. ಚಿಕ್ಕ ಸಂಸಾರ ಚೊಕ್ಕ ಸಂಸಾರ ಇವರದಾಗಿತ್ತು. ಈ ದಂಪತಿಗೆ ಒಂಬತ್ತು ವರ್ಷದ ನಿಹಾರಿಕಾ ಮತ್ತು ಆರು ವರ್ಷದ ನೇಹಾ ಇದ್ದರು. ಗಂಡ ಜಯಂತ್‌ ಹೆಂಡ್ತಿ ಮಕ್ಕಳನ್ನ ಚೆನ್ನಾಗಿಯೇ ನೋಡಿಕೊಳ್ತಿದ್ದ. ಗಂಡ- ಹೆಂಡತಿ ಇಬ್ಬರು, ತಮ್ಮ ಮಕ್ಕಳೊಂದಿಗೆ ಸ್ಕೂಲ್‌ನಲ್ಲಿ ಪೇರೆಂಟ್ಸ್‌ ಮೀಟಿಂಗ್‌ ಅಟೆಂಡ್‌ ಮಾಡಿ ವಾಪಸ್‌ ಆಗಿದ್ದರು. ಗಂಡ ಜಯಂತ್‌ ಹೆಂಡ್ತಿ ಮಕ್ಕಳನ್ನು ಬಿಟ್ಟು ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ. ಆದರೆ ಹೆಂಡ್ತಿ ಲಾವಣ್ಯಗೆ ಅದೇನ್‌ ಆಯ್ತೋ ಗೊತ್ತಿಲ್ಲ ನಿನ್ನೆ ಸಂಜೆಯೇ ಮನೆಯಿಂದ ಕಾಣೆಯಾಗಿದ್ದರು. ಹೆಂಡ್ತಿ- ಮಕ್ಕಳು ಕಾಣದಿದ್ದಕ್ಕೆ ಕಂಗಾಲಾದ ಜಯಂತ್‌ ಊರು ತುಂಬಾ ಹುಡುಕಾಡಿದ್ದಾನೆ, ಆದರೆ ಹೆಂಡ್ತಿ- ಮಕ್ಕಳು ಮಾತ್ರ ಸಿಗಲಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೆಂಡ್ತಿ ಮಕ್ಕಳ ಶವ ಕೆರೆಯಲ್ಲಿ ತೇಲ್ತಾ ಇದ್ದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಇನ್ನೂ ತಾಯಿ ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತವೇ ಬೆಳೆದಿದ್ದು,  ಸಾವಿಗೆ ನಿಖರ ಕಾರಣ ಮಾತ್ರ ಗೊತ್ತಾಗ್ತಾ ಇಲ್ಲ. ಪೇರೆಂಟ್ಸ್‌ ಮೀಟಿಂಗ್‌ಗೆ ಹೋದವಳು ಮನೆಗೆ ಹೋಗದೇ ಕೆರೆಬಳಿ ಯಾಕೆ ಹೋದಳು, ಅಥವಾ ಗಂಡ ಹೆಂಡತಿ ನಡುವೆ ಏನಾದರೂ ಗಲಾಟೆ ನಡೆದಿತ್ತಾ  ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಒಟ್ಟಾರೆ ಕಾರಣ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಮಾತಿದೆ. ಇಬ್ಬರು ಮುದ್ದಾದ ಹೆಣ್ಣುಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋದ್ರಿಂದ ಯಾವುದಾದರೂ ಬಲವಾದ ಕಾರಣ ಇದ್ಯಾ ಎಂದು ಪೊಲೀಸ್‌ ತನಿಖೆಯಲ್ಲಿ ಬಯಲಾಗಬೇಕಿದೆ.

Author:

...
Sushmitha N

Copy Editor

prajashakthi tv

share
No Reviews