CHIKKABALLAPURA : ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಕರ್ನಾಟಕ ರೈತ ಜನಸೇನಾ ಸಂಸ್ಥೆಯ ವತಿಯಿಂದ ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ರಕ್ತದಾನ ಶಿಬಿರದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ 82 ಯುನಿಟ್ ರಕ್ತವನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿದೆ. ಈ ಶಿಬಿರವು ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿತ್ತು. ವೀರ ಯೋಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಅವರು ಮಾತನಾಡಿ, “ರಕ್ತದಾನ ಎಲ್ಲ ದಾನಗಳಿಗೂ ಶ್ರೇಷ್ಠ. ಇದು ಜೀವದಾನ. ತಪ್ಪು ಕಲ್ಪನೆಗಳಿಂದ ಹೊರಬಂದು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು” ಎಂದರು. ಇನ್ನು ಸುಷ್ಮ ಶ್ರೀನಿವಾಸ್ ಅವರು, “ಯೋಧರಿಗೋಸ್ಕರ ಏನೇ ಮಾಡಿದರೂ ಕಡಿಮೆಯೇ. ಈ ಶಿಬಿರದ ಮೂಲಕ ನಾವು ಶ್ರದ್ಧಾಂಜಲಿ ಅರ್ಪಿಸಿದ್ದೇವೆ” ಎಂದು ಅಭಿಪ್ರಾಯಪಟ್ಟರು. ಸಂದೀಪ್ ಬಿ. ರೆಡ್ಡಿ ಅವರು, ಮಾತನಾಡಿ “ಸೈನಿಕರ ಸೇವೆಯನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ ಕ್ರಿಯಾತ್ಮಕ ಗೌರವ ನೀಡಬೇಕು. ಈ ಶಿಬಿರ ಒಂದು ನಿಜವಾದ ಉದಾಹರಣೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ತ್ಯಾಗರಾಜ್, ಕುಮಾರ್, ಮತ್ತು ಪ್ರಸ್ತುತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಜ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ. ರೆಡ್ಡಿ, ದಿ ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಪ್ರಾಂಶುಪಾಲ ಮುನಿಕೃಷ್ಣ, ರೈತ ಜನಸೇನಾ ಸಂಸ್ಥಾಪಕ ಅಧ್ಯಕ್ಷೆ ಸುಷ್ಮ ಶ್ರೀನಿವಾಸ್, ರಾಜ್ಯ ಗೌರವಾಧ್ಯಕ್ಷ ಜಿ.ಕೆ. ಧನಗೋಪಾಲ್, ಮತ್ತು ಪದಾಧಿಕಾರಿಗಳಾದ ಸುಧಾಕರ್, ಅಭಿಲಾಷ್, ಅಭಿಷೇಕ್, ಅರುಣ್, ಅನಿಲ್, ಮಣಿ, ಚೇತನ್, ಜಲಂಧರ್, ರಮೇಶ್ ಮತ್ತು ಹಲವಾರು ಸ್ವಯಂ ಸೇವಕರು ಭಾಗವಹಿಸಿದ್ದರು.