ಚಿಕ್ಕಬಳ್ಳಾಪುರ :
ಯುವಕನೋರ್ವ ನೋಡ್ತಾ ನೋಡ್ತಾ ಇದ್ದಂಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಚಿಕ್ಕಬಳ್ಳಾಪುರ ನಗರದ ಶನಿಮಹಾತ್ಮ ದೇವಾಲಯದ ಬಳಿ ನಡೆದಿದೆ. 25 ವರ್ಷದ ಗಿರೀಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ. ಆಟೋ ಚಾಲಕನಾಗಿರೋ ಯುವಕ ಗಿರೀಶ್ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ನಿವಾಸಿಯಾಗಿದ್ದಾನೆ.
ಆಟೋ ಓಡಿಸುತ್ತಿರೋ ಗಿರೀಶ್ ಆಸ್ಪತ್ರೆ ಬಳಿ ನಿಲ್ಲಿಸಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಧಗ ಧಗನೆ ಹೊತ್ತಿ ಉರಿಯುತ್ತಿದ್ದಂತೆ ಅಯ್ಯಯ್ಯೋ ಕಾಪಾಡಿ ಅಂತಾ ರಸ್ತೆ ಉದ್ದಕ್ಕೂ ಓಡಾಡಿದ್ದಾನೆ, ಕೂಡಲೇ ಸ್ಥಳೀಯರು ಆತನ ಮೇಲೆ ನೀರು ಸುರಿದು ಬೆಂಕಿ ಆರಿಸಲು ಮುಂದಾಗಿದ್ದಾರೆ. ಗಾಯಾಳು ಗಿರೀಶ್ನನ್ನು ಆಟೋದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಯುವಕ ಗಿರೀಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಿರೀಶ್ ಲವ್ ಫೆಲ್ಯೂರ್ ಗೆ ಅಥವಾ ಆನ್ ಲೈನ್ ಗೇಮ್ಗೆ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡನಾ ಎಂಬ ಶಂಕೆ ವ್ಯಕ್ತವಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆಲವರ ಪ್ರಕಾರ ಗಿರೀಶ್ ಸಾಲದ ಶೂಲಕ್ಕೆ ಸಿಲುಕಿದ್ದ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಅದೇನೆ ಆಗಲಿ ಮಗ ಬೆಂಕಿ ಹಚ್ಚಿಕೊಂಡಿದ್ದಕ್ಕೆ ಕುಟುಂಬಸ್ಥರ ದುಃಖ ಹೇಳತೀರದ್ದಾಗಿದೆ, ಬಡ ಕುಟುಂಬವಾದ್ದರಿಂದ ಸದ್ಯ ಮಗನಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡುವಂತಾಗಿದೆ.