BANGALORE NEWS : ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮೇ 21ರಂದು ಸೂಟ್ಕೇಸ್ನಲ್ಲಿ ಪತ್ತೆಯಾದ ಬಾಲಕಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮುನ್ನಡೆಯೊಂದು ನಡೆದಿದ್ದು, ಈ ಹೃದಯವಿದ್ರಾವಕ ಹತ್ಯೆಕೃತ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ಬಿಹಾರದಲ್ಲಿ 7 ಆರೋಪಿಗಳನ್ನು ಬಂಧಿಸಿದೆ.
ಬಂಧಿತರು ಬಿಹಾರದ ನವಾಡ ಜಿಲ್ಲೆಯವರಾಗಿದ್ದು, ಬಂಧಿತರಲ್ಲಿ ಮೂವರನ್ನು ಪೊಲೀಸರು ಗುರುತಿಸಿದ್ದಾರೆ: ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್. ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಮೇ 21ರಂದು ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಅನುಮಾನಾಸ್ಪದ ಸೂಟ್ಕೇಸ್ ಪತ್ತೆಯಾದ ಸಂದರ್ಭದಲ್ಲಿ, ಪೊಲೀಸರು ಅದನ್ನು ತೆರೆಯುತ್ತಿದ್ದಂತೆ 17 ವರ್ಷದ ಬಾಲಕಿ ರೀಮಾ ಶವ ಪತ್ತೆಯಾಯಿತು. ಶವದಲ್ಲಿ ಗುರುತಿಸುವ ಯಾವುದೇ ದಾಖಲೆಗಳು, ವೈಯಕ್ತಿಕ ವಸ್ತುಗಳು ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯನ್ನು ಕೊಲೆ ಮಾಡಿ ಬೇರೆಡೆ ಶವವನ್ನು ಈ ಸ್ಥಳದಲ್ಲಿ ಎಸೆದಿರುವ ಸಾಧ್ಯತೆ ವ್ಯಕ್ತವಾಗಿತ್ತು.
ಇದು ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುವ ಪ್ರಕರಣವಾದರೂ, ಸ್ಥಳೀಯವಾಗಿ ನಡೆದಿದೆ ಎಂಬ ಕಾರಣದಿಂದಾಗಿ ಸೂರ್ಯನಗರ ಠಾಣೆ ಪೊಲೀಸರು ತನಿಖೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇನ್ನು ಪೊಲೀಸರು ಬಿಹಾರದಿಂದ ಆರೋಪಿಗಳನ್ನು ಕರ್ನಾಟಕಕ್ಕೆ ತರಲು ಕ್ರಮ ಕೈಗೊಂಡಿದ್ದಾರೆ. ಇನ್ನು ಈ ಕೊಲೆಗೆ ನಿಖರ ಕಾರಣ ಇನ್ನೂ ಅನಾವರಣವಾಗಿಲ್ಲ. ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.