BANGALORE : ಬೆಂಗಳೂರು ಕಾಲ್ತುಳಿತ ಪ್ರಕರಣ | ಡಿಕೆಶಿ ವಿರುದ್ಧ ವಿಜಯೇಂದ್ರ ಆಕ್ರೋಶ

BANGALORE NEWS : ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಜಯವನ್ನು ವಿಜಯೋತ್ಸವದ ಮೂಲಕ ಸರ್ಕಾರವೇ ಆಚರಿಸಿತ್ತು. ಆದರೆ ಸಂಭ್ರಮದ ನಡುವೆ ಸಂಭವಿಸಿದ ದುರಂತ ಇದೀಗ ರಾಜಕೀಯ ಗರಿಗೆದರುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ RCB ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ದುರಂತದ ಕುರಿತು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

ಸರ್ಕಾರದಲ್ಲಿ ಕ್ರೀಡೆಗಿಂತ ರಾಜಕಾರಣ, ಅಭಿಮಾನಿಗಳಿಗಿಂತ ಕುಟುಂಬದವರ ಸೆಲ್ಫಿಗಳು, ಸುರಕ್ಷತೆಗಿಂತ ಆಡಂಬರ ಮತ್ತು ಆಡಳಿತಕ್ಕಿಂತ ಪ್ರಚಾರವೇ ಪ್ರಮುಖವಾಗಿದೆ ಎಂದು ತೀವ್ರ ಟೀಕೆ ಮಾಡಿದ ವಿಜಯೇಂದ್ರ, ಈ ದುರಂತ ಅನಿವಾರ್ಯವಾಗಿರುವುದು ವೈಫಲ್ಯದ ಪರಿಣಾಮ ಎಂದಿದ್ದಾರೆ. “ನಾವು ಭಾರೀ ಜನಸಂದಣಿಯನ್ನು ನಿರೀಕ್ಷಿಸಿರಲಿಲ್ಲ ಎಂಬ ನಿಮ್ಮ ಹೇಳಿಕೆ, ಜನತೆಯ ಬುದ್ಧಿಗೆ ಅವಮಾನ. ಮುಗ್ಧ ಅಭಿಮಾನಿಗಳ ಜೀವಗಳಿಗಿಂತ ನಿಮ್ಮ ಫೋಟೋಶೂಟ್‌ಗಳು ಮುಖ್ಯವಾದಾಗ ಇಂಥ ದುರಂತಗಳು ತಪ್ಪಲಾಗದು.” ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ವತಿಯಿಂದ ಈ ಕಾರ್ಯಕ್ರಮವನ್ನು ನಿರ್ವಹಿಸಿದ ಬಳಿಕ, ವಿಜಯೇಂದ್ರ ಈ ಪ್ರಚಾರಾತ್ಮಕ ನಿಲುವನ್ನು ಟೀಕಿಸಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಚಾರದ ಬದಲು ಪ್ರಜಾಪ್ರಭುತ್ವದ ಜವಾಬ್ದಾರಿಯ ಮೆಟ್ಟಿಲೆದ್ದಿರಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. "50 ದಿನಗಳ ಕಾಲ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶವಾಗಿದ್ದ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಉತ್ತರ ಪ್ರದೇಶ ಸರಕಾರದಿಂದ ನಿಮ್ಮ ಸರಕಾರ ಪಾಠ ಕಲಿಯಬೇಕಿದೆ" ಎಂದು ಅವರು ‘X’ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Author:

...
Keerthana J

Copy Editor

prajashakthi tv

share
No Reviews