ಬೆಂಗಳೂರು : ಮಂಡ್ಯದಲ್ಲಿ ವಾಹನ ತಡೆಯುವಾಗ ಆದ ಎಡವಟ್ಟಿನಿಂದ ಮಗು ಸಾವನ್ನಪ್ಪಿದ್ದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು ಇದೀಗ ನೂತನ ಎಸ್ಒಪಿ (Standard Operating Procedure) ಜಾರಿಗೆ ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಈ ಸಂಬಂಧ ಬೆಂಗಳೂರು ನಗರದಲ್ಲಿನ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಇನ್ಸ್ಪೆಕ್ಟರ್ಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ನಾಕಾಬಂದಿಗಳ ಸಮಯದಲ್ಲಿ ಹೆಚ್ಚಿನ ಎಚ್ಚರಿಕೆ ಮತ್ತು ಮಾನವೀಯ ನಿಲುವು ಅನುಸರಿಸುವಂತೆ ಸೂಚಿಸಿದ್ದಾರೆ.
ಸೂಚನೆಗಳ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:
*ರಾತ್ರಿ ಪಾಳಿಯಲ್ಲಿ ನಾಕಾಬಂದಿ ಕಡ್ಡಾಯ – ಡಿಡಿಪರಿಶೀಲನೆಯೊಂದಿಗೆ ನಾಕಾ ಬಂದಿಗಳನ್ನು ನಿಯಮಿತವಾಗಿ ನಿರ್ವಹಿಸಬೇಕು.
*ಸಿಬ್ಬಂದಿಗೆ ರಿಪ್ಲೆಕ್ಸ್ ಜಾಕೆಟ್ ಕಡ್ಡಾಯ – ಇದರಿಂದ ವಾಹನ ಚಾಲಕರಿಗೆ ದೂರದಿಂದಲೇ ಪೊಲೀಸ್ ಸನ್ನಿವೇಶ ಗೋಚರವಾಗಲಿದೆ.
*ಬ್ಯಾರಿಕೇಡ್ಗಳಲ್ಲಿ ರಿಪ್ಲೆಕ್ಸ್ ಲೈಟ್ಸ್ ಬಳಕೆ – ಅಪಘಾತ ತಡೆಯಲು ರಾತ್ರಿಯಲ್ಲಿ ದರ್ಶಕತೆಯನ್ನು ಹೆಚ್ಚಿಸುವುದು ಮುಖ್ಯ.
*ಜಿಗ್ ಜಾಗ್ ಬ್ಯಾರಿಕೇಡ್ ನಿಯಮ – ವೇಗವತ್ತಾದ ವಾಹನಗಳನ್ನು ನಿಯಂತ್ರಣಕ್ಕೆ ತರಲು ಈ ವಿಧಾನ ಪರಿಣಾಮಕಾರಿ.
*ಸಾಮಾನ್ಯ ಜನರ ಜೊತೆ ಶಿಸ್ತೂ, ಸೌಮ್ಯತೆಯೂ ಅನಿವಾರ್ಯ – ನಾಕಾಬಂದಿಯ ವೇಳೆ ಸಾರ್ವಜನಿಕರ ಗೌರವ ಉಳಿಸಬೇಕು.
*ಮಕ್ಕಳೊಂದಿಗೆ ಪ್ರಯಾಣಿಸುವವರ ಬಗ್ಗೆ ವಿಶೇಷ ಎಚ್ಚರಿಕೆ – ಮಕ್ಕಳನ್ನು ಹೊಂದಿರುವ ವಾಹನಗಳನ್ನು ಪಕ್ಕಕ್ಕೆ ನಿಲ್ಲಿಸಿ ಶಾಂತವಾಗಿ ಪರಿಶೀಲನೆ ಮಾಡಬೇಕೆಂಬ ಖಡಕ್ ಸೂಚನೆ.
*ಅವಘಡಗಳಾದ್ರೆ, ಸ್ಥಳದಲ್ಲಿರುವ ಅಧಿಕಾರಿಗಳೇ ಜವಾಬ್ದಾರರು – ತಪ್ಪು ನಡೆದರೆ ಹೊಣೆ ಯಾರದು ಎಂಬುದು ಈಗ ಸ್ಪಷ್ಟ.
ಇಂತಹ ಎಸ್ಒಪಿ ಜಾರಿಗೆ ಬರಲು ಮಂಡ್ಯದ ಅವಘಡವೇ ಕಾರಣವಾಗಿದ್ದು, ಈಗಾಗಲೇ ಸಾರ್ವಜನಿಕರಲ್ಲಿ ಇದನ್ನು ಸ್ವಾಗತಿಸುವ ನಿಲುವು ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ಮಾರ್ಗಸೂಚಿಗಳು ರಾಜ್ಯದ ಇತರ ನಗರಗಳಿಗೂ ವಿಸ್ತರಣೆ ಸಾಧ್ಯವಿದೆ.