Bangalore : ಬೆಂಗಳೂರಿನ ಎಚ್ಎಎಲ್ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿ ತಿರುಪತಿಗೆ ತೆರಳಿದ್ದ ಉದ್ಯಮಿಯೋರ್ವರ ಮನೆಯಲ್ಲಿ ನೇಪಾಳಿ ಮೂಲದ ದಂಪತಿಗಳು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಉದ್ಯಮಿ ರಮೇಶ್ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿದೆ.
ರಮೇಶ್ ಅವರು ಸುಮಾರು ಮೂರು ತಿಂಗಳ ಹಿಂದೆ ರಾಜ್ ಮತ್ತು ದೀಪಾ ಎಂಬ ನೇಪಾಳಿ ದಂಪತಿಯನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿದ್ದರು. ಈ ದಂಪತಿಗಳು ಕೆಲಸಕ್ಕೆ ಬಂದಾಗಿನಿಂದ ತುಂಬಾ ನಾಜೂಕಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು. ಅಲ್ಲದೇ ಕೆಲವೇ ದಿನಗಳಲ್ಲಿ ಮಾಲೀಕನ ನಂಬಿಕೆಗಳಿಸಿಕೊಂಡಿದ್ದರು. ಇವರಿಗೆ ಹೇಳಿ ತಿರುಪತಿಗೆ ಹೋಗಿದ್ದರು.
ರಮೇಶ್ ಅವರು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ, ಈ ದಂಪತಿ ಮನೆಗೆ ಬೀಗ ಮುರಿದು ಪ್ರವೇಶಿಸಿ, ಅಂದಾಜು 2 ಕೆಜಿ ಚಿನ್ನಾಭರಣ, ₹10 ಲಕ್ಷ ನಗದು ಹಾಗೂ ಲೈಸೆನ್ಸ್ ಪಿಸ್ತೂಲ್ ದೋಚಿ ಪರಾರಿಯಾಗಿದ್ದಾರೆ.
ವಾಪಸ್ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ಮೊಬೈಲ್ ಟವರ್ ಲೊಕೇಶನ್ ಹಾಗೂ ಪಾಸ್ಪೋರ್ಟ್ ವಿವರಗಳ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.