ರಾಯಚೂರು : ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ನಿಯಮಿತವಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಇದೀಗ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿಯೂ ಇನ್ನೊಂದು ದುರಂತ ಬೆಳಕಿಗೆ ಬಂದಿದೆ. 20 ವರ್ಷದ ಬಾಣಂತಿ ಸಿದ್ದಮ್ಮ ಅವರು ಶ್ರೀ ಶರಣಬಸವೇಶ್ವರ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.
ಸಿದ್ದಮ್ಮ ಅವರು ಕೆಲ ದಿನಗಳ ಹಿಂದೆ ನರ್ಸಿಂಗ್ ಹೋಮ್ನಲ್ಲಿ ಪ್ರಸವ ನಡೆಸಿದ್ದರು. ಆದರೆ, ಡೆಲಿವರಿ ನಂತರ ಸರಿಯಾದ ಹೊಲಿಗೆ ಕೆಲಸ ಹಾಕಲಾಗದೆ, ಹೊಲಿಗೆ ಬಿಚ್ಚಿಹೋಗಿ ತೀವ್ರ ಜ್ವರ ಕಾಣಿಸಿಕೊಂಡಿದೆ ಎಂಬುದು ಕುಟುಂಬದ ಆರೋಪ. ಇದರಿಂದ ಅವರ ಆರೋಗ್ಯ ಮತ್ತಷ್ಟು ಕುಸಿತಗೊಂಡಿದ್ದು, ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ಧಾರೆ.
ಈ ಸಾವಿಗೆ ನರ್ಸಿಂಗ್ ಹೋಮ್ನ ವೈದ್ಯರಾದ ಡಾ. ಸೌಮ್ಯ ಗುಂಡೂರು ಅವರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸಮಯಕ್ಕೆ ಚಿಕಿತ್ಸೆ ನೀಡದೆ ಕಡೆಗಣನೆ ತೋರಿರುವುದರಿಂದ ಸಿದ್ದಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಕೋಪಗೊಂಡ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಯ ಮುಂದೆ ಧರಣಿ ನಡೆಸಿ, ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಉದ್ರಿಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.