ಬೆಳಗಾವಿಯಲ್ಲಿ ಕನ್ನಡಿಗ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಭಾಷಾ ಕಿಡಿ ಹೊತ್ತಿ ಉರಿಯುತ್ತಿದ್ದು, ಇಂದು ಕನ್ನಡಪರ ಹೋರಾಟಗಾರರು ಕಂಡಕ್ಟರ್ ವಿರುದ್ಧ ದಾಖಲಾಗಿರುವ ಸುಳ್ಳು ಕೇಸ್ ಅನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬೆಳಗಾವಿಗೆ ತೆರಳಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಈ ಬೆನ್ನಲ್ಲೇ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಈ ಘಟನೆಯಲ್ಲಿ ಗಾಯಗೊಂಡ ಕಂಡಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಂದೆಡೆ ಕಂಡಕ್ಟರ್ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಲಾಗಿತ್ತು. ಆದರೆ, ಇದೀಗ ದೂರು ನೀಡಿದ್ದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಾವೂ ಕೂಡ ಕನ್ನಡಿಗರೇ, ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದಾರೆ.
ಈ ವಿಚಾರವಾಗಿ ಕನ್ನಡಿಗರು ಹಾಗೂ ಮರಾಠಿಗರ ನಡುವೆ ದೊಡ್ಡ ಜಗಳ ನಡೆಯುತ್ತಿದೆ. ನಾವು ಕೂಡ ಕನ್ನಡಾಭಿಮಾನಿಗಳು, ಕನ್ನಡದ ಬಗ್ಗೆ ನಮಗೂ ಹೆಮ್ಮೆ ಇದೆ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಬಸ್ನಲ್ಲಿ ಟಿಕೆಟ್ ವಿಷಯಕ್ಕೆ ಆದ ಗಲಾಟೆಯನ್ನು ಕನ್ನಡ, ಮರಾಠಿ ಭಾಷೆ ಎಂದು ತಪ್ಪಾಗಿ ಬಿಂಬಿಸಿದ್ದಾರೆ. ನಾವು ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೊ ಕೇಸ್ ವಾಪಸ್ ಪಡೆಯುತ್ತೇವೆ. ದಯವಿಟ್ಟು ಇದೆಲ್ಲ ಇಲ್ಲಿಗೇ ನಿಲ್ಲಲಿ ಎಂದು ಕೇಳಿಕೊಂಡಿದ್ದಾರೆ.