ಅರಸೀಕೆರೆ : ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ಚಿನ್ನಾಭರಣದ ಆಸೆಗೆ ಗುತ್ತಿಗೆದಾರನ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದ ವಿಜಯ್ ಕುಮಾರ್ (46) ಎಂಬುವರನ್ನು ಬಿಹಾರ ಮೂಲದ ಕೂಲಿ ಕಾರ್ಮಿಕರು ಹತ್ಯೆಗೈದು ಪರಾರಿಯಾಗಿದ್ದಾರೆ.
ವಿಜಯ್ ಕುಮಾರ್ ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ಆಗಿದ್ದು, KSRTC ಬಸ್ ಡಿಪೋ ಹತ್ತಿರದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುತ್ತಿದ್ದರು. ಗಾರೆ ಕೆಲಸಕ್ಕೆಂದು ಬಿಹಾರ ಮೂಲದ ವಿಕ್ರಂ ಹಾಗೂ ಸಚಿನ್ನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ವಿಕ್ರಂ ಹಾಗೂ ಸಚಿನ್, ವಿಜಯ್ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು.
ಇಬ್ಬರು ಸೇರಿ ನಾಟಕವಾಡಿ ವಿಜಯ್ ಕುಮಾರ್ ರನ್ನ ಕರೆಸಿಕೊಂಡು ಚಿನ್ನದ ಆಸೆಗೋಸ್ಕರ ಹತ್ಯೆ ಮಾಡಿದ್ದಾರೆ. ನಂತರ ಚಿನ್ನದ ಸರ, ಉಂಗುರ, ಹಣ ಹಾಗೂ ಮೊಬೈಲ್ ದೋಚಿಕೊಂಡು ವಿಜಯ್ ಅವರ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಅವರ ಕೈಯಲ್ಲಿದ್ದ ಉಂಗುರ ತೆಗೆದುಕೊಳ್ಳಲಾಗದೆ ಬೆರಳನ್ನೇ ಕತ್ತರಿಸಿ ಉಂಗುರ ಕಸಿದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಆರೋಪಿಗಳು ವಿಜಯಕುಮಾರ್ ಅವರನ್ನು ಕೊಲೆ ಮಾಡಿ ಸ್ಕೂಟಿಯಲ್ಲಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಸೀಕೆರೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ