PUNE NEWS : ಪುಣೆಯ ಹತ್ತಿರವಿರುವ ಜನಪ್ರಿಯ ಪ್ರವಾಸಿ ತಾಣ ಕುಂಡ್ಮಲದಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ದುರಂತದಲ್ಲಿ ಇಂದ್ರಾಯಣಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿದು ಆರು ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರಸ್ತುತ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಉಂಟು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ತುಂಬಿದ ಈ ಪ್ರದೇಶದಲ್ಲಿ ಸೇತುವೆ ಕುಸಿದ ಸಂದರ್ಭ, ಅಂದಾಜು 15 ರಿಂದ 20 ಮಂದಿ ಪ್ರವಾಸಿಗರು ಸೇತುವೆಯ ಮೇಲೆ ಇದ್ದು, ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಇನ್ನು ಘಟನೆಯ ಮಾಹಿತಿಗೆ ತಕ್ಷಣ ಸ್ಪಂದಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಪೊಲೀಸರು ಹಾಗೂ ವಿಪತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಈಗಾಗಲೇ ಎಂಟು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಇಬ್ಬರು ಮಹಿಳೆಯರು ಸೇತುವೆಯ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ಅಧಿಕಾರಿಗಳು ಮತ್ತು ದುರಂತ ನಿರ್ವಹಣಾ ತಂಡಗಳು ಮತ್ತಷ್ಟು ಶವಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಯ ಹಿನ್ನೆಲೆಯ ಕುರಿತು ತನಿಖೆ ನಡೆಯುತ್ತಿದ್ದು, ಸೇತುವೆಯ ಸ್ಥಿತಿಗತಿಯ ಕುರಿತು ಪ್ರಶ್ನೆಗಳು ಎದ್ದಿವೆ.