HASSAN NEWS : ಸಾಲಭಾದೆ ತಾಳಲಾರದೇ 28 ವರ್ಷದ ಯುವ ರೈತ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮಂದಿರ [Mandira] ಗ್ರಾಮದಲ್ಲಿ ನಡೆದಿದೆ. ಮಂದಿರ ಗ್ರಾಮದ ನಿರಂಜನ್ ಡಿ. [Niranjan] ಎಂಬ ರೈತ ಹೇಮಾವತಿ ನದಿಗೆ [Hemavathi River] ಹಾರಿ ಸಾವಿನ ಮನೆ ಸೇರಿದ್ದಾನೆ.
ಇನ್ನು ಯುವ ರೈತ ನಿರಂಜನ್ ಕೃಷಿಗಾಗಿ ಬ್ಯಾಂಕ್, ಖಾಸಗಿ ಫೈನಾನ್ಸ್ ಹಾಗೂ ಸ್ನೇಹಿತರಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು. ಬೆಳೆ ಬೆಳೆಯಲು ತಾಯಿ, ಪತ್ನಿಯ ಚಿನ್ನಾಭರಣಗಳನ್ನೂ ಅಡವಿಟ್ಟು ನಂಬಿಕೆಯಿಂದ ಬಿತ್ತನೆ ನಡೆಸಿದ್ದರು. ಆದರೆ ಈ ಬಾರಿಯ ಮಳೆ ಕೊರತೆ ಹಾಗೂ ಬೆಳೆ ವೈಫಲ್ಯದಿಂದ ನಿರಂಜನ್ ಭಾರೀ ನಷ್ಟ ಅನುಭವಿಸಿದ್ದರು. ಸಾಲ ತೀರಿಸಿಕೊಳ್ಳುವ ಮಾರ್ಗ ಕಾಣದೆ ನಿರಂಜನ್ ತೀವ್ರ ಮನಃ ಸ್ಥಿತಿಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೇ 4ರಂದು ರಾತ್ರಿ ಕುಂದೂರು ಗ್ರಾಮದ ಮನೆಯಿಂದ ಬೈಕ್ನಲ್ಲಿ ತೆರಳಿದ್ದ ನಿರಂಜನ್ ಬಳಿಕ ಮನೆಗೆ ಮರಳಿಲ್ಲ. ಶೆಟ್ಟಿಹಳ್ಳಿ ಸೇತುವೆ ಬಳಿ ಅವರ ಬೈಕ್ ಪತ್ತೆಯಾದ ಬಳಿಕ ಆತ ನದಿಗೆ ಹಾರಿರಬಹುದೆಂದು ಶಂಕಿಸಿ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಪೊಲೀಸರು ಹಾಗೂ ಗ್ರಾಮಸ್ಥರೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.
ಇನ್ನು ಜೂನ್ 6ರಂದು ಮಂದಿರ ಗ್ರಾಮದ ಬಳಿ ಹೇಮಾವತಿ ನದಿಯಲ್ಲಿ ಶವ ತೇಲುತ್ತಿದ್ದು ಕಂಡುಬಂದಿದ್ದು, ಅದು ನಿರಂಜನ್ ಎಂದು ಗುರುತಿಸಲಾಗಿದೆ. ಶವವನ್ನು ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ನದಿಯಿಂದ ಹೊರತೆಗೆಯಲಾಗಿದೆ. ಈ ದುರ್ಘಟನೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.