TUMAKURU: ಹೇಮಾವತಿ ಲಿಂಕಿಂಗ್ ಕೆನಾಲ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಯೋಜನೆಯ ಅನುಷ್ಠಾನಕ್ಕೂ ಮೊದಲು ಸ್ಥಳೀಯ ರೈತರ ಜೊತೆ ಮಾತುಕತೆ ನಡೆಸಿ, ಅವರ ಮನವೊಲಿಸುವ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು “ರೈತ ನಾಯಕರು ನಮಗೆ ಸ್ವಲ್ಪ ಸಮಯ ಕೊಡಿ, ನಮ್ಮ ಜೊತೆ ಮಾತನಾಡಿ ಎಂದಿದ್ದಾರೆ. ನಾನು ಈ ಬಗ್ಗೆ ನೀರಾವರಿ ಸಚಿವರಿಗೂ ಡಿಸಿಎಂಗೂ ತಿಳಿಸಿದ್ದೇನೆ. ಅವರಿಂದ ಸಮಯ ಬಂದ ಮೇಲೆ ರೈತರೊಂದಿಗೆ ಕೂತು ಮಾತುಕತೆ ನಡೆಸುವ ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿದರು.
“ನಾವು ಕನ್ವಿನ್ಸ್ ಮಾಡೋ ಪ್ರಯತ್ನ ಮಾಡ್ತೀವಿ. ಅವರು ಒಪ್ಪಿಕೊಳ್ಲಿಲ್ಲ ಅಂದ್ರೆ ಮತ್ತೆ ಬೇರೆ ಮಾರ್ಗ. ಆದ್ದರಿಂದ ಅವರಿಗೆ ಅವಕಾಶ ಕೊಡುವುದು ನ್ಯಾಯಸಂಗತ. ಅಲ್ಲದೇ, ಯಾವುದೇ ತೀರ್ಮಾನವನ್ನು ನೀರಾವರಿ ಸಚಿವರು ತಗೊಳೋದಿಲ್ಲ, ಅದು ಸರ್ಕಾರದ ಒಟ್ಟೂ ತೀರ್ಮಾನ ಆಗಿರುತ್ತೆ,” ಎಂಬುದಾಗಿ ಪರಮೇಶ್ವರ್ ತಿಳಿಸಿದರು.
ತಮ್ಮ ಜಿಲ್ಲೆಯ ಮುಖಂಡರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಆಕ್ಷೇಪಣೆಗಳು ಮತ್ತು ಬೇಡಿಕೆಗಳನ್ನು ಮನವೊಲಿಸುವ ಪ್ರಯತ್ನವನ್ನು ನೀರಾವರಿ ಸಚಿವರೇ ನಡೆಸಲಿದ್ದಾರೆ ಎಂಬ ಭರವಸೆಯನ್ನು ಪರಮೇಶ್ವರ್ ನೀಡಿದರು.