ತುಮಕೂರು : ಹೇಮಾಗ್ನಿಯ ಜ್ವಾಲೆಗೆ ನಿನ್ನೆ ತುಮಕೂರು ಹೊತ್ತಿ ಉರಿಯುವುದೊಂದು ಬಾಕಿ ಇತ್ತು. ನಿಷೇಧಾಜ್ಞೆಯ ನಡುವೆಯೂ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಸಾವಿರಾರು ರೈತರು ಬೀದಿಗಿಳಿದಿದ್ರು. ಪೊಲೀಸರ ಸರ್ಪಗಾವಲನ್ನ ಕೂಡ ಭೇದಿಸಿ ಕೆನಾಲ್ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಅಲ್ಲೇ ಇದ್ದ ಹಿಟಾಚಿಗಳ ಮೂಲಕ ನಾಲೆಗೆ ಮಣ್ಣು ಹಾಕಿ, ಅಲ್ಲಿದ್ದ ಬೃಹತ್ ಗಾತ್ರದ ಕಬ್ಬಿಣದ ಪೈಪುಗಳನ್ನ ನಾಲೆಗೆ ತಳ್ಳಿ ಆಕ್ರೋಶ ಹೊರಹಾಕಿದ್ರು. ಇದೀಗ ಹೇಮೆ ಹೋರಾಟದಲ್ಲಿ ಭಾಗಿಯಾದ ರೈತರ ವಿರುದ್ಧ ಸರ್ಕಾರ ಎಫ್ಐಆರ್ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾದ ಸ್ವಾಮೀಜಿಗಳ ವಿರುದ್ಧವೂ ಎಫ್ಐಆರ್ ದಾಖಲೂ ಮಾಡಲಾಗಿದೆ ಎನ್ನಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನ ವಹಿಸಿದ್ದ ಶಾಸಕರಾದ ಸುರೇಶ್ ಗೌಡ, ಎಂ.ಟಿ.ಕೃಷ್ಣಪ್ಪ, ಜ್ಯೋತಿಗಣೇಶ್ ಸೇರಿದಂತೆ 11 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದ್ದು, ಇದರಲ್ಲಿ ಇಬ್ಬರು ಮಠಾಧೀಶರನ್ನ ಕೂಡ ಸೇರಿಸಲಾಗಿದೆ ಎನ್ನಲಾಗಿದೆ. ಯಾವ ಸ್ವಾಮೀಜಿ ಅನ್ನೋದನ್ನ ಉಲ್ಲೇಖಿಸದೇ ಕೇವಲ ಇಬ್ಬರು ಸ್ವಾಮೀಜಿಗಳು ಅಂತಾ ಮಾತ್ರ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಒಂದು ವೇಳೆ ಮಠಾಧೀಶರ ವಿರುದ್ಧ ಎಫ್ಐಆರ್ ದಾಖಲಾಗಿದ್ದೇ ಆದಲ್ಲಿ, ರಾಜ್ಯಾದ್ಯಂತ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಲಿದೆ.