ತುಮಕೂರು:
ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದು, ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ಸಿಎಂ ಆಗಿ 9ನೇ ಬಜೆಟ್ ಮಂಡಿಸಿರೊ ಸಿದ್ದರಾಮಯ್ಯ ಹಲವು ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ಸುಮಾರು 4 ಲಕ್ಷದ 9 ಸಾವಿರದ 549 ಕೋಟಿ ರೂಪಾಯಿ ಗಾತ್ರದ ಆಯವ್ಯಯದಲ್ಲಿ ಹಲವು ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದಾರೆ. ತವರು ಜಿಲ್ಲೆ ಮೈಸೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೆ ಆದ್ಯತೆ ನೀಡುವ ಪ್ರಯತ್ನವನ್ನು ಮಾಡಿದ್ದು, ತಮ್ಮ ದಾಖಲೆಯ ಬಜೆಟ್ನಲ್ಲಿ ಹಲವು ಹೊಸ ಯೋಜನೆಗಳನ್ನು ಸಹ ನೀಡಿದ್ದಾರೆ. ತುಮಕೂರು ನಗರದ ಬೆಂಗಳೂರಿಗೆ ಸರಿಸಮಾನವಾಗಿ ಬೆಳೆಯುತ್ತಿದ್ದು, ತುಮಕೂರಿಗೆ ಸಾಕಷ್ಟು ಕೊಡುಗೆಗಳನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.
ತುಮಕೂರಿನ ಕೈಗಾರಿಕಾ ಪ್ರದೇಶವಾದ ವಸಂತ ನರಸಾಪುರದಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಸುಮಾರು 20 ಕೋಟಿಯಷ್ಟು ಅನುದಾನವನ್ನು ಘೋಷಿಸಿದ್ದಾರೆ, ಜೊತೆಗೆ ತುಮಕೂರಿನಲ್ಲಿ ಜಪಾನೀಸ್ ಇಂಡಸ್ಟ್ರೀಯಲ್ ಪಾರ್ಕ್ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗಿದೆ. ತುಮಕೂರು ರೈಲ್ವೆಗೆ ಸುಮಾರು 600 ಕೋಟಿ ಮೀಸಲಿಟ್ಟಿದ್ದು, ಈ ಯೋಜನೆಯಲ್ಲಿ ತುಮಕೂರು- ದಾವಣಗೆರೆ ನೇರ ರೈಲ್ವೆ ಸೇರಿ ಹಲವು ಯೋಜನೆಗಳು ಒಳಪಟ್ಟಿವೆ.
ಇದಲ್ಲದೇ ಆರೋಗ್ಯಕ್ಕೆ ಸಿದ್ದರಾಮಯ್ಯಗೆ ಮಹತ್ವದ ಒತ್ತು ಕೊಟ್ಟಿದ್ದು, ಕೊರಟಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ನವೀಕರಣಕ್ಕೆ ಅನುದಾನ ಘೋಷಣೆ ಮಾಡಿದ್ದಾರೆ. ಇದಿಷ್ಟಲ್ಲದೇ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ತಾಲೂಕುಗಳು ಬರ ಪೀಡಿತಕ್ಕೆ ಸೇರಿದ್ದು, ಈ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲು ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ತುಮಕೂರಿನ ನೀರಾವರಿ, ರೈಲ್ವೆ, ಕೈಗಾರಿಕಾ ವಲಯಗಳಿಗೆ ಬಜೆಟ್ನಲ್ಲಿ ಅನುದಾನ ಘೋಷಿಸಿದ್ದು, ಇತರೆ ವಲಯಗಳಿಗೆ ಅಷ್ಟು ಆದ್ಯತೆ ನೀಡಿಲ್ಲ. ಸಿದ್ದು ಬಜೆಟ್ ಮೇಲೆ ತುಮಕೂರಿಗರು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದು, ನಿರೀಕ್ಷೆಗಳು ಹುಸಿಯಾಗಿದೆ.