ULLAL : ಸೆಮಿನಾರ್ ತಪ್ಪಿಸಲು ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ಕಾಲೇಜಿಗೆ ಬಾಂಬ್ ಇಟ್ಟಿದ್ದೇನೆ ಎಂಬ ಹುಸಿ ಬೆದರಿಕೆ ಕರೆ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಕಣಚೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಡಾ. ಚಲಸಾನಿ ಮೋನಿಕಾ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಾ. ಚಲಸಾನಿ ಮೋನಿಕಾ ಚೌಧರಿ ಜೂನ್ 4 ರಂದು ಸೆಮಿನಾರ್ ನೀಡಬೇಕಿತ್ತು. ಆದರೆ ಸೆಮಿನಾರ್ ತಪ್ಪಿಸಲು ತಾನು ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ಕಾಲೇಜಿನ ಹೆರಿಗೆ ವಾರ್ಡ್ನ ದೂರವಾಣಿಗೆ “ಬೆಳಗ್ಗೆ 11ಕ್ಕೆ ಕಣಚೂರು ಆಸ್ಪತ್ರೆ ಸ್ಫೋಟಿಸುವುದಾಗಿ” ಬಾಂಬ್ ಬೆದರಿಕೆ ಕರೆ ನೀಡಿದ್ದಾಳೆ. ಈ ಕರೆ ಹಿನ್ನೆಲೆ ಕಾಲೇಜಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರೀಕ್ಷೆ ನಡೆಸಿ, ಯಾವುದೇ ಸ್ಪೋಟಕವಸ್ತು ಇಲ್ಲದಿರುವುದನ್ನು ದೃಢಪಡಿಸಿದರು. ನಂತರ ತಾಂತ್ರಿಕ ತನಿಖೆಯ ಮೂಲಕ ಕರೆ ಮಾಡಿದ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.