UDUPI : ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ್ದ ಒಂಟಿ ಕಾಡಾನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ ಮತ್ತು ಕಮಲಶಿಲೆ ಗ್ರಾಮಗಳಲ್ಲಿ ಈ ಕಾಡಾನೆ ಕಾಣಿಸಿಕೊಂಡಿದ್ದು, ಬೆಳೆ ನಾಶ ಹಾಗೂ ಜನರಲ್ಲಿ ಭೀತಿಯ ಪರಿಸ್ಥಿತಿಯನ್ನು ಉಂಟುಮಾಡಿತ್ತು. ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿ, ತಜ್ಞರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಆನೆಯನ್ನು ಕಠಿಣ ಪರಿಶ್ರಮದ ಬಳಿಕ ಸೆರೆಹಿಡಿದಿದೆ. ಈಗ ಆನೆಯನ್ನು ಅರಣ್ಯ ಪ್ರದೇಶದ ಒಳಗಿನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾಡಾನೆಯಿಂದ ಯಾವುದೇ ಅಪಾಯಕಾರಿ ವರ್ತನೆ ಇಲ್ಲದಿದ್ದರೂ ಆತಂಕ ಸಹಜವಾಗಿಯೇ ಇತ್ತು. ಏಕೆಂದರೆ ಆನೆಯನ್ನ ಗ್ರಾಮದೊಳಗೆ ಕಂಡದ್ದೆ ಇದೇ ಮೊದಲು.
ಹಾಸನ ಜಿಲ್ಲೆಯ ಭದ್ರ ವೈಲ್ಡ್ ಲೈಫ್ನಿಂದ ದಾರಿ ತಪ್ಪಿ ಶಿವಮೊಗ್ಗ ಜಿಲ್ಲೆಯ ಮೂಲಕ ಉಡುಪಿ ಜಿಲ್ಲೆಯ ಗಡಿಯೊಳಗೆ ನುಸುಳಿದ್ದ ಒಂಟಿ ಸಲಗ ಗ್ರಾಮದೊಳಗೆ ಓಡಾಡಿಕೊಂಡಿತ್ತು ಇದೀಗ ಆನೆ ಸೆರೆಯಾಗಿದ್ದು. ಗ್ರಾಮಸ್ಥರಲ್ಲಿ ಮೂಡಿದ್ದ ಆತಂಕ ನಿವಾರಣೆಯಾಗಿ, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಈ ಶ್ರಮಕ್ಕೆ ಸ್ಥಳೀಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.