ತುಮಕೂರು:
ಗೃಹಸಚಿವ ಡಾ.ಜಿ ಪರಮೇಶ್ವರ್ ತವರು ಕ್ಷೇತ್ರದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಮುಂದುವರೆಯುತ್ತಲೇ ಇದೆ. ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರು ತಂದಿದ್ದರು ಕೂಡ ಮೈಕ್ರೋ ಫೈನಾನ್ಸ್ಗಳ ಕಾಟಕ್ಕೆ ಜನರು ನಲುಗಿ ಹೋಗ್ತಾ ಇದ್ದಾರೆ. ಅದೆಷ್ಟೋ ಅಮಾಯಕ ಜೀವಗಳು ಕೂಡ ಬಲಿಯಾಗಿದ್ದರು. ಈ ಬೆನ್ನಲ್ಲೇ ಮೊನ್ನೆ ತಾನೆ ಬಡ್ಡಿದಂಧೆಕೊರರ ಕಾಟಕ್ಕೆ ಮಂಡ್ಯದ ವ್ಯಕ್ತಿ ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ಮಾಸುವ ಮುನ್ನವೇ ಕುಣಿಗಲ್ನಲ್ಲಿ ಮೈಕ್ರೋ ಸಿಬ್ಬಂದಿಯ ಅಂಧ ದರ್ಬಾರ್ ಬೆಳಕಿಗೆ ಬಂದಿದೆ.
ಕೇವಲ ಒಂದು ತಿಂಗಳ ಸಾಲದ ಹಣ ಕಟ್ಟದಿದ್ದಕ್ಕೆ ಮಹಿಳೆ ಮನೆ ಮುಂದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಕೊಟ್ಟ ಘಟನೆ ಕುಣಿಗಲ್ ತಾಲೂಕಿನ ಗೋವಿಂದಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಿಳೆ BSS ಖಾಸಗಿ ಫೈನಾನ್ಸ್ ಕಂಪನಿಯಿಂದ ಸಾಲವನ್ನು ಪಡೆದುಕೊಂಡಿದ್ದಳು. ಸಾಲದ ಕಂತನ್ನು ಪ್ರತಿ ತಿಂಗಳು ಕಟ್ಟುತ್ತಾ ಹೋಗಿದ್ದಳು. ಆದರೆ ಕಳೆದ ಒಂದು ತಿಂಗಳು ಮಾತ್ರ ಸಾಲದ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಮಹಿಳೆ ಮನೆ ಮುಂದೆ ಬಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಕೊಟ್ಟಿದ್ದಾರೆ. ಮುಂದಿನ ತಿಂಗಳು ಹಣ ಪಾವತಿ ಮಾಡುತ್ತೇನೆ ಎಂದು ಮಹಿಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡರು ಕೂಡ ಇದಕ್ಕೆ ಒಪ್ಪದೇ ಕಿರುಕುಳ ಕೊಟ್ಟಿದ್ದಾರೆ.
ಸಾಲದ ಕಂತು ಕಟ್ಟುತ್ತೀನಿ ಎಂದು ಮನವಿ ಮಾಡಿಕೊಂಡಿದ್ದರೂ ಕೂಡ ಮನೆ ಮುಂದೆ ಗಲಾಟೆ ಮುಂದುವರೆಸಿದ್ದು, ರಾತ್ರಿ ಆದರೂ ಮನೆ ಮುಂದೆಯೇ ನಿಂತು ಸಾಲದ ಕಂತು ಕಟ್ಟುವಂತೆ ಪಟ್ಟು ಹಿಡಿದಿದ್ದರು. ಹಣ ಪಾವತಿ ಮಾಡುವವರೆಗೂ ನಾವು ಹೋಗಲ್ಲ ಎಂದು ಫೈನಾನ್ಸ್ ಸಿಬ್ಬಂದಿ ಧಮ್ಕಿ ಹಾಕಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳವನ್ನು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಒಟ್ಟಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಸುಗ್ರೀವಾಜ್ಞೆ ಹಾಕಿದ್ರು ಕೂಡ ಕೆಲ ಫೈನಾನ್ಸ್ ಸಿಬ್ಬಂದಿದಾರರು ಕಾಟ ಕೊಡೋದನ್ನು ಮುಂದುವರೆಸುತ್ತಾನೆ ಇದ್ದಾರೆ. ಹೀಗಾಗಿ ಮೈಕ್ರೋ ಫೈನಾನ್ಸ್ಗಳ ಕಾಟಕ್ಕೆ ಸರ್ಕಾರ ಕಟ್ಟುನಿಟ್ಟಿನ ಬ್ರೇಕ್ ಹಾಕಲೇಬೇಕಿದೆ.