GUBBI: ತುಮಕೂರು ಜಿ.ಪಂ ಸಿಇಒ ಜಿ. ಪ್ರಭು ವಿರುದ್ಧ ವ್ಯಾಪಕ ಟೀಕೆ

ಗುಬ್ಬಿ: 

ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು ವಿರುದ್ಧ ದಲಿತ ಮುಖಂಡರು ನಿರಂತರವಾಗಿ ಟೀಕೆ ಮಾಡ್ತಾನೆ ಇದ್ದಾರೆ. ಇಂದು ಕೂಡ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರು ಸುದ್ದಿಗೋಷ್ಠಿ ನಡೆಸಿ ಜಿಲ್ಲಾ ಪಂಚಾಯ್ತಿ ಸಿಇಒ ವಿರುದ್ಧ ಕಿಡಿಕಾರಿದ್ರು. ಈ ವೇಳೆ ಪಟ್ಟಣ ಪಂಚಾಯ್ತಿ ಸದಸ್ಯ ರೇಣುಕಾ ಪ್ರಸಾದ್, ದಲಿತ ಸಂಘರ್ಷ ಸಮಿತಿ ಗುಬ್ಬಿ ತಾಲ್ಲೂಕು ಸಂಚಾಲಕ ಕಡಬ ಶಂಕರ್, ಕುಂದರನಹಳ್ಳಿ ನಟರಾಜ್, ಸವಿತಾ ಸಮಾಜದ ಅಧ್ಯಕ್ಷ ಪಾಪಣ್ಣ, ಮೇದಾರರ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಸೇರಿ ಹಲವರು ಉಪಸ್ಥಿತರಿದ್ದರು.

ದಲಿತ ಹಾಗೂ ಹಿಂದುಳಿದ ವರ್ಗದ ಅಧಿಕಾರಿಗಳನ್ನು ಸಿಒಒ ಪ್ರಭು ಅವರು ನಿರಂತರವಾಗಿ ಟಾರ್ಗೆಟ್ ಮಾಡ್ತಿದ್ದಾರೆ ಎಂದು ದೂರುತ್ತಿದ್ದಾರೆ. ಜಿಲ್ಲೆಯಾದ್ಯಂತ ಸುದ್ದಿಗೋಷ್ಠಿ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ರೀತಿ ಗಮನಿಸಿದರೆ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ದಲಿತ ಸಚಿವರಿಗಿಂತ ಇವರೇ ಪ್ರಭಾವಿಗಳು ಅಂತ ಕಾಣುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಟೀಕೆ ಮಾಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಜೆಜೆಎಂ ಮತ್ತು ಇನ್ನಿತರ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು.ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಿದ ಬಗ್ಗೆ ಕೂಡ ಸಿಇಓ ವಿರುದ್ಧ ಪ್ರತಿಭಟನೆ ನಡೆದಿತ್ತು. ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಧರಣಿ ಸತ್ಯಾಗ್ರಹ ಕೂಡಾ ನಡೆದಿತ್ತು. ಹೀಗೆ ನಿರಂತರವಾಗಿ  ಸಿಇಓ ಧೋರಣೆಗೆ ನಲುಗಿ ಹೋರಾಟ ನಡೆದರೂ ಕ್ರಮ ಎನ್ನುವುದು ಕೈಗೊಳ್ಳದಿರುವುದು ಬೇಸರ ತರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ತುರುವೇಕೆರೆಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಿವಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ದಲಿತ ಸಚಿವರಿದ್ದರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲಿತ ವಿರೋಧಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪ ಮಾಡಿದ್ರು. ಜಿಲ್ಲೆಯ ದಲಿತ ಸಚಿವರಿಗೆ ದಲಿತರ ಹಿತ ಕಾಪಾಡುವ ನೈತಿಕತೆ ಇಲ್ಲದಾಗಿದೆಯೇ ಎನ್ನುವುದು ತಿಳಿಯುತ್ತಿಲ್ಲ. ಕೂಡಲೇ ದಲಿತ ವಿರೋಧಿ  ಸಿಇಓ ಅವರನ್ನು ಅಮಾನತು ಮಾಡಿ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಈ ಉನ್ನತ ಅಧಿಕಾರಿ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Author:

...
Sub Editor

ManyaSoft Admin

share
No Reviews