TUMKUR : ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕುರಿತು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ಗೌಡ, ಈ ಯೋಜನೆಯ ಹಿಂದೆ ರಾಜಕೀಯ ಲಾಭದ ಪ್ರಯತ್ನವಿದೆ ಎಂದು ಗಂಭೀರ ಆರೋಪ ಮಾಡಿ, ತಜ್ಞ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಿನ್ನೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟಗಾರರು ತೀವ್ರ ಪ್ರತಿಭಟನೆಯನ್ನು ಮಾಡಿದ್ರು. ಇದಕ್ಕೆ ಶಾಸಕ ಸುರೇಶ್ ಗೌಡ ಪ್ರತಿಕ್ರಿಯಿಸಿ “ನನ್ನ ಮಕ್ಕಳ ಮೇಲಾಣೆ ಈ ವಿಚಾರದಲ್ಲಿ ಶೇ.1 ರಾಜಕೀಯ ಮಾಡ್ತಿಲ್ಲ. ರಾಮನಗರಕ್ಕೆ ನೀರು ಹರಿಸಿದರೆ, ತುಮಕೂರಿಗೆ ಒಂದು ಹನಿಯೂ ಸಿಗೋದಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ಖಾಲಿಪೋಲಿಗಳು ಸೇರಿ, ಕೆಲವರ ರಾಜಕೀಯ ಲಾಭಕ್ಕಾಗಿ ತಯಾರಿಸಿದ ವರದಿಯನ್ನು ಕಸಕ್ಕೆ ಹಾಕಿ. ತಕ್ಷಣವೇ ಐಐಎಸ್ಸಿ ತಜ್ಞರನ್ನೊಳಗೊಂಡ ಸಮೀಕ್ಷೆ ನಡೆಸಬೇಕು” ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸುರೇಶ್ಗೌಡ, “ಕೆಡಿಪಿ ಸಭೆಯಲ್ಲಿ ತಮಗೆ ವಿರೋಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇ ಹೇಳಿದ್ದರು. ಆದರೆ ಇದೀಗ ಟೆಕ್ನಿಕಲ್ ಕಮಿಟಿ ಎಂಬ ಹೆಸರಿನಲ್ಲಿ ಖಾಲಿ ಪೋಲಿಗಳನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ಇದರಲ್ಲಿ ನಾನು, ಕೃಷ್ಣಪ್ಪ ಹಾಗೂ ಪರಮೇಶ್ವರ್ ಬಂದಿದ್ದೆವು. ಆದರೆ, ಯಾರಾದರೂ ಐಐಎಸ್ಸಿ ಸಂಸ್ಥೆಯ ತಜ್ಞರನ್ನು ತಗೊಂಡಿದ್ದರೆ, ನಾನು ಹರ್ಷದಿಂದ ಪ್ರಶಂಸೆ ಮಾಡುತ್ತಿದ್ದೆ. ಆದರೆ ಹಾಗಾಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆ ಹಿಂದಿರುವ ಉದ್ದೇಶಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರು, ಸರ್ಕಾರದ ಕೆಲವು ಮಂತ್ರಿಗಳ ಚೇಲಾಗಳನ್ನೇ ಕಮಿಟಿ ಸದಸ್ಯರನ್ನಾಗಿ ಮಾಡಿಕೊಂಡು ತೀರ್ಮಾನ ಕೈಗೊಂಡಿರುವುದನ್ನು ಪ್ರಶ್ನಿಸಿದರು.