TUMAKURU : ನಮ್ಮ ತುಮಕೂರು ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಆದರೆ ನಗರದ ಸೌಂದರ್ಯವನ್ನು ಕಸದ ಸಮಸ್ಯೆ ಹಾಳು ಮಾಡುತ್ತಿದೆ. ನಗರದ ಮೂಲೆ ಮೂಲೆಯಲ್ಲಿಯೂ ಕಸದ ಸಮಸ್ಯೆ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡುತ್ತಾ, ಪಾಲಿಕೆ ಗಮನ ಸೆಳೆಯುವ ಪ್ರಯತ್ನ ಮಾಡ್ತಿದೆ. ಇಂದು ಪ್ರಜಾಶಕ್ತಿ ಟಿವಿ ತುಮಕೂರಿನ ಜಯಪುರದ ಹೌಸಿಂಗ್ ಬೋರ್ಡ್ನಲ್ಲಿ ಹೆಚ್ಚಾಗಿರೋ ಕಸದ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದು, ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡ್ತಿದೆ.
ತುಮಕೂರು ನಗರದ ಜಯಪುರದ ಹೌಸಿಂಗ್ ಬೋರ್ಡ್ನ ಮಸೀದಿ – ಎ- ಉಮರ್ ರಸ್ತೆ ಬದಿಯೇ ರಾಶಿ ರಾಶಿ ಕಸ ಬಿದ್ದಿದೆ. ಸುಮಾರು ದಿನಗಳಿಂದ ಕಸ ಅಲ್ಲಿಯೇ ಬಿದ್ದಿರೋದರಿಂದ ಕೊಳೆತು ಗಬ್ಬು ನಾರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಜನರು ಕಸವನ್ನು ಕವರ್ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಕಸವನ್ನು ಎಸೆದು ಹೋಗ್ತಾ ಇದ್ದು, ಕಸದ ರಾಶಿಗೆ ಹಂದಿ, ನಾಯಿಗಳು ಮುಗಿ ಬೀಳುತ್ತಿವೆ. ಕವರ್ನಲ್ಲಿರೋ ಕಸವನ್ನು ನಾಯಿ, ಹಂದಿಗಳು ಎಳೆದಾಡ್ತಿದ್ದು ರಸ್ತೆಯಲ್ಲಿ ಓಡಾಡೋ ಜನರಿಗೆ ನಾಯಿಗಳ ಕಾಟ ಕೂಡ ಶುರುವಾಗಿದೆ.
ಇತ್ತ ರಾಶಿ ರಾಶಿ ಕಸ ಬಿದ್ದಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಸುಮಾರು ದಿನಗಳಾಗಿದರೂ ಕಸವನ್ನು ಎತ್ತುವ ಕೆಲಸ ಮಾತ್ರ ಮಾಡ್ತಾ ಇಲ್ಲ. ಇದರಿಂದ ಅಕ್ಕ ಪಕ್ಕದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತ್ತಿದ್ದಾರೆ.
ರಸ್ತೆ ಬದಿಯೇ ರಾಶಿ ರಾಶಿ ಕಸ ಬಿದ್ದಿದ್ದರೂ ಕಸ ಎತ್ತುವ ಕೆಲಸವನ್ನು ಪಾಲಿಕೆ ಮಾಡದಿರೋದು ಒಂದ್ಕಡೆ ಆದರೆ, ಮತ್ತೊಂದ್ಕಡೆ ಕಸದ ವಾಹನ ಮನೆ ಮುಂದೆ ಬಂದ್ರು ಕೂಡ ಜನರು ಮಾತ್ರ ಕಸವನ್ನು ಕಸದ ಗಾಡಿಗೆ ಹಾಕುವ ಬದಲು, ಕವರ್ನಲ್ಲಿ ಕಟ್ಟಿ ರಾತ್ರಿ ವೇಳೆ ಬಂದು ಬಿಸಾಡಿರೋದರಿಂದ ಕಸದ ಸಮಸ್ಯೆಯನ್ನು ಸಾರ್ವಜನಿಕರೇ ಸೃಷ್ಟಿ ಮಾಡುವಂತಾಗಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳ ಜೊತೆಗೆ ಜನರು ಕೈಜೋಡಿಸಿ ನಗರದಲ್ಲಿ ಉದ್ಭವಿಸ್ತಿರೋ ಕಸದ ಸಮಸ್ಯೆ ಮುಕ್ತಿಗೆ ಮುಂದಾಗಬೇಕಿದೆ.