BANGALORE : ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರದ ಕೊಂಬೆ | ಕೋಮಾಗೆ ಜಾರಿದ ಸವಾರ

BANGALORE NEWS : ಬನಶಂಕರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ದುರಂತದಲ್ಲಿ, ಚಲಿಸುತ್ತಿದ್ದ ಸ್ಕೂಟರ್‌ ಸವಾರನ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಆತಂಕ ಉಂಟುಮಾಡಿದೆ. ಅಕ್ಷಯ್ ಎಂಬ ಯುವಕ ಈ ದುರ್ಘಟನೆಯಲ್ಲಿ ತಲೆಗೇ ಭಾರಿ ಪೆಟ್ಟು ಬಿದ್ದು ಸದ್ಯ ಕೋಮಾಗೆ ತಲುಪಿದ್ದಾರೆ.

ಘಟನೆ ಭಾನುವಾರ ಮಧ್ಯಾಹ್ನ 1:15ರ ಸುಮಾರಿಗೆ ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ ಸಂಭವಿಸಿದ್ದು, ಅಕ್ಷಯ್ ತನ್ನ ಸ್ಕೂಟರ್‌ನಲ್ಲಿ ಮಟನ್ ಖರೀದಿಸಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಆತನ ತಲೆಗೆ ಬಿದ್ದ ಕೊಂಬೆಯ ಹೊಡೆತದಿಂದ ತೀವ್ರ ಗಾಯವಾಗಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.

ಅಕ್ಷಯ್‌ ಸ್ಥಿತಿ ಕುರಿತು ನ್ಯೂರೋ ಸರ್ಜನ್ ಡಾ. ಶ್ರೀದತ್ ಅವರು ಮಾಹಿತಿ ನೀಡುತ್ತಾ, "ತಲೆಗೆ ಭಾರೀ ಪೆಟ್ಟಾಗಿದ್ದು, ತಕ್ಷಣ ಎಮರ್ಜೆನ್ಸಿ ಆಪರೇಷನ್ ಮಾಡಲಾಗಿದೆ. ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ತೀವ್ರವಾಗಿ ಚಿಂತಾಜನಕವಾಗಿದೆ. ಅಂಗಾಂಗಗಳು ಕೆಲಸ ಮಾಡಲು ಔಷಧಿ ನೀಡಲಾಗುತ್ತಿದೆ. ಈ ಸ್ಥಿತಿಯಲ್ಲಿ ಹೆಚ್ಚಿನ ಯಾವುದೇ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ," ಎಂದು ಹೇಳಿದರು.

ಅಕ್ಷಯ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಭಾನುವಾರ ತಮ್ಮ ತಂದೆಯ ಜನ್ಮದಿನದ ನಿಮಿತ್ತ ಮನೆಗೆ ಮಟನ್ ತರಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ತಲೆ ಬುರುಡಿನಲ್ಲಿ 10ಕ್ಕೂ ಅಧಿಕ ಬಿರುಕುಗಳು ಕಂಡುಬಂದಿವೆ.

ಈ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಮರಗಳ ರಕ್ಷಣಾ ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಸಾರ್ವಜನಿಕರ ಜೀವಕ್ಕೆ ಸಂಭಾವ್ಯ ಅಪಾಯವಿರುವಂತಹ ಹಳೆಯ ಮರಗಳನ್ನು ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Author:

...
Keerthana J

Copy Editor

prajashakthi tv

share
No Reviews