ಬೆಳಗಾವಿ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಹಾಲಿಂಗೇಶ್ವರ ನಗರದಲ್ಲಿ ನಿರಂತರ ಮಳೆಯ ಅವಾಂತರಕ್ಕೆ ಮನೆಯ ಗೋಡೆ ಕುಸಿದು ಒಂದು ದುಃಖದ ಘಟನೆ ನಡೆದಿದೆ. ಈ ಭೀಕರ ಘಟನೆಯಲ್ಲಿ ಮೂರು ವರ್ಷದ ಕೀರ್ತಿಕಾ ನಾಗೇಶ ಪೂಜಾರಿ ಎಂಬ ಕಂದಮ್ಮ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಮನೆಯ ಕೋಣೆಯಲ್ಲಿ ಮಲಗಿದ್ದಾಗ ಪಕ್ಕದ ಮನೆಯ ಗೋಡೆ ನಾಗೇಶ ಪೂಜಾರಿ ಮನೆ ಮೇಲೆ ಬಿದ್ದಿದೆ. ಪರಿಣಾಮ ಘಟನೆಯಲ್ಲಿ 3 ವರ್ಷದ ಕಂದಮ್ಮ, ತಾಯಿ ರೇಷ್ಮಾ, ಸಹೋದರಿ ಖುಷಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಗೋಕಾಕ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಗೋಕಾಕ ನಗರದಲ್ಲಿ ಮಳೆಗೆ ಇದುವರೆಗೆ ಎರಡನೇ ಬಲಿಯಾಗಿದೆ. ಕಳೆದ ವಾರದಲ್ಲೇ ಗೋಕಾಕದ ವ್ಯಕ್ತಿಯೋರ್ವನು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದ.ಇನ್ನು ಘಟನೆಯ ಮಾಹಿತಿ ತಿಳಿದ ಕೂಡಲೆ ನಗರಸಭೆ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.