ಶಿರಾ:
ಶಿರಾದ ಹಾಸ್ಟೆಲ್ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತಾನೆ ಬಂದಿದೆ. ಇವತ್ತು ಕೂಡ ಮತ್ತೊಂದು ಹಾಸ್ಟೆಲ್ನ ಅವ್ಯವಸ್ಥೆಯ ಮೇಲೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು, ಈ ಹಾಸ್ಟೆಲ್ನಲ್ಲಿ ಮಕ್ಕಳಿಗೆ ಮಲಗಲು ಮಂಚಗಳಿಲ್ಲ, ಅಲ್ಲದೇ ಶುಚಿತ್ವ ಅಂತೂ ಇಲ್ಲಿನವರಿಗೆ ಗೊತ್ತೇ ಇಲ್ಲದಂತಿದೆ. ಏಕೆಂದರೆ ಇಲ್ಲಿನ ಮಕ್ಕಳಿಗೆ ಕೊಡುವ ಚಪಾತಿಯನ್ನು ನೆಲದಲ್ಲಿ ತಯಾರಿಸಿ ಕೊಡ್ತಾ ಇದ್ದಾರೆ, ಜೊತೆಗೆ ಇಲ್ಲಿನ ಮಕ್ಕಳಿಗೆ ತೊಂದರೆ ಕೊಡಲೇಂದೇ ಹಾಸ್ಟೆಲ್ ಆವರಣವನ್ನೇ ಪುಂಡರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಇವೆಲ್ಲಾ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿರೋ ದಲಿತ ಮಕ್ಕಳಿರೋ ಹಾಸ್ಟೆಲ್ನ ದುಸ್ಥಿತಿಯಾಗಿದೆ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಗಳು ಬಡ ದಲಿತ ಹೆಣ್ಣು ಮಕ್ಕಳಿಗೆ ವರದಾನವಾಗುವ ಬದಲು ಮತ್ತಷ್ಟು ಸಮಸ್ಯೆಗೆ ಕಾರಣೀಭೂತವಾಗುತ್ತಿದೆ ಎಂದರೆ ತಪ್ಪಾಗಲ್ಲ. ಹೌದು ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ದಲಿತ ಮಕ್ಕಳಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾರಂಭಿಸಿರುವ ವಿದ್ಯಾರ್ಥಿನಿ ನಿಲಯವನ್ನು ಹಾಸ್ಟೆಲ್ ಮೇಲ್ವಿಚಾರಕರು ಹಾಗೂ ಜನ ಪ್ರತಿನಿಧಿಗಳು ಹದಗೆಡಿಸಿದ್ದಾರೆ. ಇಲ್ಲಿ ಶುಚಿತ್ವ ಅನ್ನೋದು ಮರಿಚೀಕೆಯಾಗಿದ್ದು, ಶೌಚಾಲಯಗಳು ಗಬ್ಬು ನಾರುತ್ತಿದ್ದು, ಕ್ಲೀನ್ ಮಾಡಿಸುವ ಕೆಲಸ ಮಾತ್ರ ಆಗುತ್ತಿಲ್ಲ, ಸ್ವಚ್ಛತೆ ಇಲ್ಲದೇ ಇರುವುದರಿಂದ ನೊಣಗಳ ಕಾಟ ಹೆಚ್ಚಾಗಿದೆ. ಇನ್ನು ಇಲಾಖೆ ವತಿಯಿಂದ ಸರಬರಾಜು ಆಗ್ತಿರೋ ಹಾಸಿಗೆಗಳು ಕೆಲವೇ ಕೆಲವು ಇದ್ದು, ಕೆಲ ಮಂಚದ ಮೇಲೆ ಹಾಸಿಗೆಯೂ ಇಲ್ಲ ಜೊತೆಗೆ ಮಂಚವೂ ಇಲ್ಲದಂತಾಗಿದೆ.
ಇಲ್ಲಿನ ಮಕ್ಕಳ ಆರೋಗ್ಯಕ್ಕೆ ಸುರಕ್ಷತೆಯೇ ಇಲ್ಲದಂತಾಗಿದೆ ಏಕೆಂದರೆ ಮಕ್ಕಳಿಗೆ ಕೊಡುವ ಆಹಾರವನ್ನು ಸರಿಯಾಗಿ ತಯಾರಿಸಲ್ಲ. ಇದಕ್ಕೆ ಪೂರಕವಾಗುವಂತೆ ನಮಗೆ ಒಂದು ವಿಡಿಯೋ ಕೂಡ ವೈರಲ್ ಆಗಿದ್ದು ನೆಲದ ಮೇಲೆಯೇ ಚಪಾತಿ ಹಿಟ್ಟನ್ನು ನಾದುತ್ತಿರೋದು, ಚಪ್ಪಾತಿ ಲಟ್ಟಿಸುತ್ತಿದ್ದು, ಸುತ್ತಲೂ ನೊಣಗಳು ಹರಿದಾಡುತ್ತಿವೆ. ಒಮ್ಮೆ ಊಹಿಸಿಕೊಳ್ಳಿ ಈ ಆಹಾರವನ್ನು ಸೇವಿಸಿದರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂಬ ಕಳವಳ ವಿದ್ಯಾರ್ಥಿಗಳಲ್ಲಿದೆ. ಹಾಗೂ ಹೆಣ್ಣು ಮಕ್ಕಳಿರೋ ಹಾಸ್ಟೆಲ್ನ ಆವರಣದಲ್ಲಿ ಪುಂಡರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಹಾಸ್ಟೆಲ್ನ ಆವರಣದಲ್ಲಿ ಹುಡುಗರು ಮೊಬೈಲ್ ನೋಡ್ತಾ ಕಾಲ ಹರಣ ಮಾಡ್ತಾ ಇರೋದು ಕೂಡ ಪ್ರಜಾಶಕ್ತಿ ಕ್ಯಾಮೆರಾ ಕಣ್ಣಿಗೆ ಬಿದಿದೆ. ಇನ್ನು ಇಷ್ಟೆಲ್ಲಾ ಅವ್ಯವಸ್ಥೆ ಇದ್ದರು ಕೂಡ ಹಾಸ್ಟೆಲ್ನ ವಾರ್ಡನ್ ಮಾತ್ರ ಕೇರ್ ಮಾಡ್ತಾ ಇಲ್ಲ.
ಇನ್ನು ಹಾಸ್ಟೆಲ್ಗಳ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಡಿಗೇರ್ ಅವರು ಹಾಸ್ಟೆಲ್ಗಳ ಅವ್ಯವಸ್ಥೆ ಕಂಡು ಬಂದಲ್ಲಿ ಹಾಗೂ ವಾರ್ಡನ್ಗಳ ಬೇಜವಾಬ್ದಾರಿ ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.