ಗುಬ್ಬಿ : ತುಮಕೂರಿನಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ದಿನದಿಂದ ದಿನಕ್ಕೆ ಕಿಚ್ಚು ಜೋರಾಗ್ತಾ ಇದೆ. ಹೇಮಾವತಿ ನೀರು ಮತ್ತೊಂದು ಜಿಲ್ಲೆಗೆ ಹರಿಸಿಕೊಳ್ಳಲು ಸಿದ್ಧವಾದ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿಗೆ ಬಿಜೆಪಿ- ಜೆಡಿಎಸ್ ನಾಯಕರು ಸೇರಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದೇ ತಿಂಗಳ 31ರಂದು ತುಮಕೂರಿನಲ್ಲಿ ಬೃಹತ್ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದ್ದು, ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಭಾಗಿಯಾಗುವಂತೆ ಆಗ್ರಹ ಕೇಳಿಬಂದಿದೆ.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧ ಸಮಿತಿಯು ಪ್ರತಿಭಟನಾ ಪೂರ್ವಭಾವಿ ಸಭೆ ನಡೆಸಲಾಯಿತು. ರೈತ ಸಂಘ ಹಾಗೂ ಹಲವು ರಾಜಕೀಯ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದು, ನಮ್ಮ ಪರ ಸಂಸದರು ನಿಲ್ಲಲೇಬೇಕು. ಹಾಗಾಗಿ ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದು ಮಾತುಗಳು ಕೇಳಿ ಬಂದಿದೆ. ಈ ವೇಳೆ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಪ್ರವಾಸ ಕೈಗೊಂಡು ಮನೆಯಿಂದ ಒಬ್ಬರಂತೆ ರೈತರು ಹೋರಾಟಕ್ಕೆ ಬರುವಂತೆ ಮನವಿ ಮಾಡಲಾಗುತ್ತಿದೆ. ಪ್ರತಿಭಟನೆಗೆ ಮಠಾಧೀಶರು, ಶಾಸಕರು ಬರಲಿದ್ದಾರೆ. ಮುಖಂಡರ ಗೃಹ ಬಂಧನ ಮಾಡುವ ಪ್ರಯತ್ನ ನಡೆದರೆ ಉಳಿದ ರೈತರು ತಾಲ್ಲೂಕಿನ ಹೆದ್ದಾರಿಯನ್ನು ಎಲ್ಲೆಂದರಲ್ಲಿ ಬಂದ್ ಮಾಡಿ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಚುನಾವಣೆ ಬಂದಾಗ ಪಕ್ಷ ಚಟುವಟಿಕೆ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ಹೋರಾಟ ಹೇಮಾವತಿ ನೀರಿಗಾಗಿ ನಡೆಸಬೇಕಿದೆ. ವೈ.ಕೆ.ರಾಮಯ್ಯ ಅವರ ಹೋರಾಟದ ಮಾದರಿಯಲ್ಲಿ ಸಾವಿರಾರು ರೈತರು ನಮ್ಮ ನೀರಿನ ಹಕ್ಕು ಪ್ರತಿಪಾದಿಸಬೇಕು ಎಂದರು.
ಇನ್ನು ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಅ.ನ.ಲಿಂಗಪ್ಪ, ಸಾಗರನಹಳ್ಳಿ ವಿಜಯಕುಮಾರ್, ಜಿ.ಆರ್.ಶಿವಕುಮಾರ್ ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.