ಕೋಲಾರ : ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ | ಆಂಧ್ರ ಮೂಲದ ವೈದ್ಯ ಸ್ಥಳದಲ್ಲೇ ಸಾವು

ಕೋಲಾರ : ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಹೈವೇಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆಂಧ್ರಪ್ರದೇಶ ಮೂಲದ ವೈದ್ಯರು ಸ್ಥಳದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಬಳಿಯಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಆಂಧ್ರಪ್ರದೇಶದ ಅನಂತಪುರ ಮೂಲದ ಡಾ. ಕೃಷ್ಣ ಜಗನ್ (40) ಎಂದು ಗುರುತಿಸಲಾಗಿದೆ. ಅವರು ಅನಂತಪುರದಿಂದ ಕುಪ್ಪಂನಲ್ಲಿನ ಪಿಇಎಸ್ ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ಚಾಲನೆ ವೇಳೆ ಅವರ ಕಾರು ಎಕ್ಸ್‌ಪ್ರೆಸ್‌ವೇನಲ್ಲಿ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ, ಸ್ಥಳದಲ್ಲೇ ಮೃತರಾಗಿದ್ದಾರೆ. ಇನ್ನು ಪ್ರಾಥಮಿಕ ಮಾಹಿತಿಯಂತೆ, ಅಪಘಾತಕ್ಕೆ ಅತಿ ವೇಗದ ಚಾಲನೆಯೇ ಕಾರಣ ಎಂಬುದಾಗಿ ಶಂಕಿಸಲಾಗುತ್ತಿದೆ. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ರಸ್ತೆ ಸಂಚಾರ ಆರಂಭವಾದ ನಂತರದಿಂದ ಅಪಘಾತಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಅಪರಾಪ್ತ ಕಾಮಗಾರಿ, ಸ್ಪಷ್ಟ ಸೂಚನೆಗಳ ಕೊರತೆ ಮತ್ತು ಅತಿವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿರುವುದು ವರದಿಯಾಗಿದೆ. ಇನ್ನುಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

Author:

...
Keerthana J

Copy Editor

prajashakthi tv

share
No Reviews