ರಥಸಪ್ತಮಿ ಅಂಗವಾಗಿ ಹಲವೆಡೆ ಜಾತ್ರಾ ಮಹೋತ್ಸವಗಳು ಜರುಗುತ್ತಲೇಇವೆ ಐತಿಹಾಸಿಕ ಪ್ರಸಿದ್ಧ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ ಶ್ರೀ ಬಂಡೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ರು. ಇನ್ನು ರಥೋತ್ಸವದಲ್ಲಿ ಶಾಸಕ ಟಿ.ಬಿ ಜಯಚಂದ್ರ ಸೇರಿ ತಾಲ್ಲೂಕಿನ ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಭಾಗವಹಿಸಿದ್ದು, ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಹಾಗೂ ದೇವರ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.. ಅಲ್ದೇ ದೇವಾಲಯದಲ್ಲಿ ರಥಾಂಗಹೋಮ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು.ಬಂಡಿ ರಂಗನಾಥ ಸ್ವಾಮಿ ದೇವರನ್ನು ಉತ್ಸವದ ಮೂಲಕ ತಂದು ಭಕ್ತರ ಜಯಘೋಷಗಳ ನಡುವೆ ರಥದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ರಥೋತ್ಸವಕ್ಕೆ ಸುತ್ತಮುತ್ತಲ ಹಳ್ಳಿಗಳ ಜನರಲ್ಲದೇ ಮಹಾರಾಷ್ಟ್ರ,ತಮಿಳುನಾಡು, ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸಹಸ್ರಾರು ಭಕ್ತರು ಈ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದ್ರು.
ಪ್ರತಿ ವರ್ಷದಂತೆ ರಥದ ಮೇಲ್ಭಾಗದಲ್ಲಿ ಗರುಡ ಪ್ರತ್ಯಕ್ಷವಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ವಿಜೃಂಭಣೆಯಿಂದ ಭಕ್ತರು ರಥವನ್ನು ಎಳೆದರು.ಬಾಳೆಹಣ್ಣಿಗೆ ದವನ ಸಿಕ್ಕಿಸಿ ರಥದ ಮೇಲಿನ ಕಳಸಕ್ಕೆ ತಾಗುವಂತೆ ಎಸೆಯುವ ಭಕ್ತರು ಕಷ್ಟ ದೂರ ಮಾಡುವಂತೆ ದೇವರಲ್ಲಿ ಮೊರೆ ಇಡುವ ನಂಬಿಕೆ ಇಂದಿಗೂ ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಜಾತ್ರೆ ಪ್ರಯುಕ್ತ ಬಾರಿ ದನಗಳ ಜಾತ್ರೆಯನ್ನು ಆಯೋಜಿಸಲಾಗಿದ್ದು, ಉತ್ತಮವಾದ ರಾಸುಗಳಿಗೆ ಬಹುಮಾನ ನೀಡಲಾಯಿತು.