ಗುಬ್ಬಿ:
2025 ರ ರಾಜ್ಯ ಬಜೆಟ್ ನಲ್ಲಿ ಗುಬ್ಬಿ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೇಳುವುದಾಗಲಿ, ಅದರ ಬಗ್ಗೆ ಚಕಾರವನ್ನೇ ಎತ್ತದೆ ಬಿಡಿಗಾಸು ಅನುದಾನ ತರದೇ ಬರಿಗೈಯಲ್ಲಿ ವಾಪಸ್ ಆಗುವ ಮೂಲಕ ಗುಬ್ಬಿ ಶಾಸಕರಾದ ಎಸ್.ಆರ್. ಶ್ರೀನಿವಾಸ್ ತಾಲ್ಲೋಕಿನ ಜನತೆಯ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಕುಮಾರ್ ಕಿಡಿಕಾರಿದ್ದಾರೆ.
ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಕುಮಾರ್ ನೀರಾವರಿಗೆ ಸಂಬಂಧಪಟ್ಟಂತೆ ಎತ್ತಿನಹೊಳೆ ಯೋಜನೆಗೆ ಗುಬ್ಬಿ ತಾಲೂಕಿನಲ್ಲಿ ಸುಮಾರು 28 ಕಿಲೋಮೀಟರ್ ದೂರದ 38 ಕೆರೆಗಳಿಗೆ ಬಜೆಟ್ ನಲ್ಲಿ ನೀರು ಬರಿಸಬಹುದಿತ್ತು ಆದರೆ ಇವರ ನಿರ್ಲಕ್ಷದಿಂದ ಯಾವುದೇ ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನೇ ರೂಪಿಸಿಲ್ಲ ಎಂದರು. ಮಂಚಲದೊರೆ, ಅಂಕಸಂದ್ರ, ಹೊಸಕೆರೆ, ಅಳಿಲು ಘಟ್ಟ, ದೊಡ್ಡಗುಣಿ ಸೇರಿದಂತೆ ಕೊಂಡ್ಲಿ ಗ್ರಾಮ ಪಂಚಾಯಿತಿಗಳ ಹಲವು ಕೆರೆಗಳಿಗೆ ನೀರು ಹರಿಸುವ ಅವಕಾಶವಿದ್ದರೂ ಈ ಬಾರಿಯ ಬಜೆಟ್ ನಲ್ಲಿ ಅವಕಾಶ ಸಿಕ್ಕದಿರುವುದು ವಿಪರ್ಯಾಸ.
ಕೊರಟಗೆರೆ ಮತ್ತು ಮಧುಗಿರಿಯ ಇಬ್ಬರು ಸಚಿವರಿಗೆ ಸೀಮಿತವಾಗಿದ್ದ ಈ ಬಜೆಟ್ ಜಿಲ್ಲೆಯಲ್ಲಿ ಯಾವುದೇ ತಾಲೂಕಿಗೆ ಅವಕಾಶ ದೊರೆತಿಲ್ಲ. ಯಾವುದೇ ಅನುದಾನ ಕೇಳದೆ ಬಜೆಟ್ ನಲ್ಲಿ ತಮ್ಮ ಹಕ್ಕು ಮಂಡಿಸದೆ ಬರಿಗೈನಲ್ಲಿ ವಾಪಸ್ ಬಂದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದರು.