BANGALORE NEWS : ಬೆಂಗಳೂರು ನಗರದ ಕೆಪಿ ಅಗ್ರಹಾರದಲ್ಲಿ ಆರು ವರ್ಷದ ಬಾಲಕ ಕೇಕ್ ಸೇವಿಸಿದ ನಂತರ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಗುವಿನ ತಂದೆ ಮತ್ತು ತಾಯಿಯೂ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರ್ಘಟನೆಗೆ ಆನ್ಲೈನ್ನಲ್ಲಿ ತರಿಸಿದ ಕೇಕ್ ಕಾರಣವಾಗಿದ್ದೇ ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ಮಗುವನ್ನು ವಿನಯ್ (6) ಎಂದು ಗುರುತಿಸಲಾಗಿದೆ. ನೆನ್ನೆ ಸಂಜೆ ಕುಟುಂಬದವರು ಆನ್ಲೈನ್ ಮೂಲಕ ಕೇಕ್ ಅನ್ನು ಆರ್ಡರ್ ಮಾಡಿ ಮನೆಯಲ್ಲೇ ಸೇವಿಸಿದ್ದರು. ಈ ವೇಳೆ ಮನೆಯಲ್ಲಿದ್ದವರೆಂದರೆ ತಂದೆ, ತಾಯಿ ಹಾಗೂ ವಿನಯ್. ಮನೆಯ ಮತ್ತೊಬ್ಬ ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿದ್ದಳು.
ಕೇಕ್ ಸೇವಿಸಿದ ಕೆಲ ಹೊತ್ತಿನಲ್ಲೇ ಮಗು ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ FSL ಪರೀಕ್ಷೆಗೆ ರವಾನಿಸಲಾಗುವುದು. ಕಿಮ್ಸ್ ಆಸ್ಪತ್ರೆಯ ವೈದ್ಯರು ದೇಹದ ಭಾಗಗಳನ್ನು ಪರೀಕ್ಷಿಸಿ ನಿಖರವಾದ ಸಾವಿನ ಕಾರಣ ಪತ್ತೆ ಹಚ್ಚಲಿದ್ದಾರೆ.
ಇನ್ನು ಮಗುವಿನ ತಂದೆ ಮತ್ತು ತಾಯಿ ಕೂಡ ಕೇಕ್ ಸೇವನೆಯ ನಂತರ ತೀವ್ರ ಅಸ್ವಸ್ಥರಾದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಆಹಾರದ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳು ಮೂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ.