ಕೊರಟಗೆರೆ:
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ನಾಣ್ಣುಡಿಯನ್ನು ವಿದ್ಯಾರ್ಥಿಗಳು ಪಾಲನೆ ಮಾಡಲೆಂದು ಇಲ್ಲಿನ ಕಾಲೇಜು ಪ್ರಾಂಶುಪಾಲರು ಮುಂದಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸರಸ್ವತಿ ದೇವಿ ಒಲಿದರೆ ಅವರ ಭವಿಷ್ಯ ಉಜ್ವಲವಾಗುತ್ತೆ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ದೇವಿಗೆ ಭಕ್ತಿಯಿಂದ ನಮಿಸಿ ಹೋಗಬೇಕು ಎಂದು ಕೊರಟಗೆರೆ ಪಟ್ಟಣದ ಕಾಲೇಜಿನಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು.
ಕೊರಟಗೆರೆ ಪಟ್ಟಣದ ಹನುಮಂತಪುರದಲ್ಲಿರೋ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರೋ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಜಿ.ಸುಧೀರ್ ಹಾಗೂ ಕಾಲೇಜು ಸಿಬ್ಬಂದಿಯ ಸಹಕಾರದೊಂದಿಗೆ ಸರಸ್ವತಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಹೋಮ, ಹವನ, ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.
ಈ ವೇಳೆ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಜಿ ಸುಧೀರ್, ವಿದ್ಯೆ ಕಲಿಯುವ ಜಾಗ ದೇವಾಲಯ ಇದ್ದಂತೆ. ನಿತ್ಯ ವಿದ್ಯೆ ಕಲಿಯಲು ಬರುವ ನೂರಾರು ವಿದ್ಯಾರ್ಥಿಗಳಿಗೆ ನಾಡಿನ ಸಂಸ್ಕೃತಿ ಹಾಗೂ ಧಾರ್ಮಿಕ ಭಾವ ಮೂಡಿಸುವ ದೃಷ್ಟಿಯಿಂದ ಆವರಣದಲ್ಲಿ ವಿದ್ಯೆಗೆ ಅಧಿಪತಿಯಾದ ಶಾರದಾ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ ಎಂದರು.
ಕಾಲೇಜು ಪ್ರಿನ್ಸಿಪಾಲ್ ಈರಪ್ಪನಾಯ್ಕ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಕಲಿಯುತ್ತಿರೋ ಕಾಲೇಜನ್ನು ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಸೌಲಭ್ಯ ಒದಗಿಸಲಾಗುತ್ತಿದೆ. ಕಲಿಕಾ ಸ್ಥಳದಲ್ಲಿ ಶ್ರದ್ಧಾ ಭಕ್ತಿ ಮೂಡಲಿ ಎಂಬ ಮಹದಾಸೆಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಿದರು.