TUMAKURU NEWS : ಪರವಾನಗಿ ಇಲ್ಲದೆ ಗೃಹ ಬಳಕೆ ಕೀಟನಾಶಕಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ದಿನಸಿ ಅಂಗಡಿಯ ಮೇಲೆ ಕೃಷಿ ಇಲಾಖೆಯ ಜಾರಿ ದಳ ದಾಳಿ ನಡೆಸಿದ್ದು, ₹32 ಸಾವಿರ ಮೌಲ್ಯದ ಕೀಟನಾಶಕಗಳನ್ನು ವಶಪಡಿಸಿಕೊಂಡಿದೆ.
ತುಮಕೂರು ನಗರದ ಮಂಡಿಪೇಟೆಯ ಮುಖ್ಯ ರಸ್ತೆಯಲ್ಲಿರುವ ‘ರಾಜಾರಾಂ ಅಂಡ್ ಕಂಪನಿ’ ದಿನಸಿ ಅಂಗಡಿಯಲ್ಲಿ, ‘ಕಿಂಗ್’ ಮತ್ತು ‘ಡೆಡ್ಲೈನ್’ ಎಂಬ ಬ್ರಾಂಡ್ನ ಗೃಹ ಬಳಕೆ ಕೀಟನಾಶಕಗಳನ್ನು ಯಾವುದೇ ಪರವಾನಗಿ ಇಲ್ಲದೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ, ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ದಾಳಿ ವೇಳೆ, ಯಾವುದೇ ದಾಖಲೆ ಅಥವಾ ಲೈಸೆನ್ಸ್ ಇಲ್ಲದೇ 42 ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ಸಂಗ್ರಹಿಸಲಾಗಿದ್ದ 23,799 ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಯಿತು. ಇದರ ಮೌಲ್ಯ ಸುಮಾರು ₹32,000. ಈ ಕೀಟನಾಶಕ ಮಾದರಿಗಳನ್ನು ತಕ್ಷಣವೇ ಗುಣ ನಿಯಂತ್ರಣ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆ ವರದಿ ಪ್ರಕಾರ, ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಾರಾಟಗಾರರು, ವಿತರಕರು, ಸರಬರಾಜುದಾರರು ಹಾಗೂ ಉತ್ಪಾದಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ ತನಿಖೆಯ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ದಾಳಿಯಲ್ಲಿ ಜಾರಿ ದಳ-2 ಸಹಾಯಕ ನಿರ್ದೇಶಕ ಅಶ್ವತ್ಥನಾರಾಯಣ, ಕೃಷಿ ಅಧಿಕಾರಿ ಶೋಭಾ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು.
ಕೃಷಿ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಗೃಹ ಬಳಕೆ ಕೀಟನಾಶಕಗಳನ್ನು ಖರೀದಿಸುವಾಗ ಪರವಾನಗಿ ಹೊಂದಿದ ಅಂಗಡಿಗಳಿಂದಲೇ ಖರೀದಿ ಮಾಡಬೇಕು, ಮತ್ತು ಉತ್ಪನ್ನದ ಪ್ಯಾಕಿಂಗ್, ಮ್ಯಾನುಫ್ಯಾಕ್ಚರಿಂಗ್ ಮಾಹಿತಿ ಪರಿಶೀಲಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.