ರಾಯಬಾಗ:
ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ರಾಜ್ಯಪಾಲರಿಗೆ ಕರುಡು ಪ್ರತಿಯನ್ನು ಸಲ್ಲಿಸಿತ್ತು. ಆದ್ರೆ ರಾಜ್ಯ ಸರ್ಕಾರ ಈ ಬಗ್ಗೆ ಷರತ್ತುಗಳನ್ನು ಹಾಕಿದ್ದರು ಕ್ಯಾರೇ ಅನ್ನದ ಕೆಲ ಮೈಕ್ರೋಫೈನಾನ್ಸ್ ಕಂಪನಿಗಳು ತನ್ನ ದರ್ಪವನ್ನು ಮಾತ್ರ ತೋರಿಸುತ್ತಲೇ ಇತ್ತು. ಆದ್ರೆ ಇದೀಗ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಖಾಸಗಿ ಮೈಕ್ರೋಫೈನಾನ್ಸ್ ಕಂಪನಿಯೊಂದರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಹೌದು ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಯಲ್ಲವ್ವ ಅಶೋಕ್ ನಾಯ್ಡು ಎಂಬ ಮಹಿಳೆಯು ಚಿಕ್ಕೋಡಿಯ ಅನ್ನಪೂರ್ಣೇಶ್ವರಿ ಖಾಸಗಿ ಮೈಕ್ರೋ ಫೈನಾನ್ಸ್ ನಲ್ಲಿ 50 ಸಾವಿರ ಹಣ ಪಡೆದಿದ್ದಳು. ಇವರು ಎರಡು ಕಂತನ್ನು ಸರಿಯಾಗಿ ಕಟ್ಟಿದ್ದರು, ಆದರೆ ಮೂರನೇ ಕಂತು ಕಟ್ಟಲು ಸ್ವಲ್ಪ ತಡವಾಗಿದ್ದಕ್ಕೇ ಕಾಲಾವಕಾಶವನ್ನು ಸಹ ಕೇಳಿದ್ದರಂತೆ. ಆದ್ರೆ ಇದಕ್ಕೆ ಒಪ್ಪಿಗೆ ನೀಡದೆ ಫೈನಾನ್ಸ್ ನ ಸಿಬ್ಬಂದಿಗಳು ಮುಂಜಾನೆಯಿಂದ ಸಂಜೆವರೆಗೂ ಸಾಲಗಾರರ ಮನೆ ಮುಂದೆ ನಿಂತು ಇಂದು ನಾವು ಹಣ ಕಟ್ಟಿಸಿಕೊಂಡೆ ಇಲ್ಲಿಂದ ಹೋಗುವುದು ಎಂದು ಪಟ್ಟು ಹಿಡಿದಿದ್ದಾರೆ.
ಇದೆಲ್ಲವನ್ನು ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಫೈನಾನ್ಸ್ ಸಿಬ್ಬಂದಿಯನ್ನು ಹಿಡಿದು ನಡು ರಸ್ತೆಯಲ್ಲೇ ಫೈನಾನ್ಸ್ ನವರ ವಿರುದ್ದ ಪ್ರತಿಭಟನೆಯನ್ನು ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಫೈನಾನ್ಸ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.