ಗುಬ್ಬಿ :
ಯುಗಾದಿ ಹಬ್ಬ ಬಂತೆಂದೆರೆ ಟೆಂಟ್ಗಳನ್ನು ಹಾಕಿಕೊಂಡು ಅಂದರ್ ಬಾಹರ್ ಆಡ್ತಾ ಇರೋರಿಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ತುಮಕೂರು ಎಸ್ಪಿ ಅಶೋಕ್ ಅಕ್ರಮ ಇಸ್ಪೀಟ್ ಆಟ ಕಂಡುಬಂದಲ್ಲಿ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವುಂತೆ ಆದೇಶ ಹೊರಡಿಸಿದ್ದರು. ಆದರೆ ಎಸ್ಪಿ ಆದೇಶಕ್ಕೂ ಕ್ಯಾರೆ ಅನ್ನದ ಕೆಲವರು ತೆರೆಮರೆಯಲ್ಲಿ ಅಂದರ್ ಬಾಹರ್ ಆಟ ಜೋರಾಗಿ ನಡೆಯುತ್ತಿದ್ದು, ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗುಬ್ಬಿ ತಾಲೂಕಿನ ಚೇಳೂರು, ಸಿ.ಎಸ್ ಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಅಕ್ರಮವಾಗಿ ಆಡ್ತಿದ್ದ ಜೂಜು ಅಡ್ಡೆಗಳ ಮೇಲೆ ಗುಬ್ಬಿ ಪೊಲೀಸರು ಏಕಾಏಕಿ ದಾಳಿ ಮಾಡಿದ್ದು, ಜೂಜುಕೋರರನ್ನು ಹಾಗೂ ಸಾವಿರಾರು ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಒಂದೇ ದಿನದಲ್ಲಿ ಗುಬ್ಬಿ ಪಟ್ಟಣ ವ್ಯಾಪ್ತಿಯಲ್ಲಿ 8 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಗುಬ್ಬಿ, ಚೇಳೂರು, ಸಿಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಜೂಜು ಆಡ್ತಿದ್ದ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, ಸಾವಿರಾರು ರೂಪಾಯಿ ಹಣ ಹಾಗೂ ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಣ್ಣೂರು ಗ್ರಾಮದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು 8 ಮಂದಿ ಜೂಜುಕೋರರನ್ನು ಹಾಗೂ ಸುಮಾರು 10 ಸಾವಿರದ 400 ರೂಪಾಯಿಗಳನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ. ಇತ್ತ ಕಸಬಾ ಹೋಬಳಿ ಚಿಕ್ಕೋನಹಳ್ಳಿ ಗ್ರಾಮದ ಜೂಜು ಅಡ್ಡೆ ಮೇಲೆ ರೇಡ್ ಮಾಡಿ 6 ಮಂದಿ ಜೂಜುಕೋರರನ್ನು, 29 ಸಾವಿರದ 300 ರೂಪಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, ಇನ್ನು ಚೇಳೂರು ಹೋಬಳಿಯ ಸಿಗೇನಹಳ್ಳಿ ಹಾಗೂ ಭಂಗೆನಹಳ್ಳಿ ಗ್ರಾಮದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 10 ಜನರನ್ನು ವಶಕ್ಕೆ ಪಡೆದುಕೊಂಡಿದ್ರೆ, ಸಾವಿರಾರು ರೂಪಾಯಿ ಹಣವನ್ನು ಸೀಜ್ ಮಾಡಿದ್ದಾರೆ.
ಇನ್ನು ಸಿ.ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಕೊಡಗೀಹಳ್ಳಿ ಗ್ರಾಮದ ಕಾಲೋನಿ ಬಳಿ ಅಕ್ರಮವಾಗಿ ಜೂಜು ಆಡ್ತಿದ್ದ 6 ಮಂದಿ ಜೂಜು ಕೋರರನ್ನು, 4 ಸಾವಿರದ ನಾಲ್ಕು ನೂರಾ 10 ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿ.ಕೋಡಿಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಹತ್ತಿರದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ, 3,900 ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮರಾಠಿ ಪಾಳ್ಯ ಗೇಟ್ ಹತ್ತಿರದ ರಂಗನಾಥಪುರ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 14 ಜನರನ್ನು ಬಂಧಿಸಿ, 18,920 ರೂಪಾಯಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅಲ್ದೇ ಸಿ ಎಸ್ ಪುರ ಹೋಬಳಿಯ ಜನ್ನೇನಹಳ್ಳಿ ಗ್ರಾಮದ ಶಿಂಷಾ ತೊರೆಯ ಹತ್ತಿರ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ನಡೆದ ದಾಳಿಯಲ್ಲಿ ಎಂಟು ಮಂದಿಯನ್ನು ಬಂಧಿಸಿ, 39,500 ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಸ್ಪಿ ಆದೇಶಕ್ಕೂ ಕಿಮ್ಮತ್ತು ಕೊಡದೇ ಇಸ್ಪೀಟ್ ಅಡ್ತಿದ್ದವರನ್ನು ಕೊನೆಗೂ ಲಾಕ್ ಆಗಿದ್ದು, ಸಾವೀರಾರು ರೂಪಾಯಿ ಹಣವನ್ನು ಸೀಜ್ ಮಾಡಿದ್ದಾರೆ. ಜೂಜುಕೋರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.