ಬೆಂಗಳೂರು : ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯದ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದೆ. ಈ ವೇಳೆ ಜನಪ್ರಿಯ ನಟ ಹಾಗೂ ರಾಜಕೀಯ ನಾಯಕ ಪವನ್ ಕಲ್ಯಾಣ್ ಅವರು "ಜಯಹೇ ಕರ್ನಾಟಕ ಮಾತೆ" ಎಂದು ಕನ್ನಡದಲ್ಲಿ ಭಾವಪೂರ್ಣವಾಗಿ ಭಾಷಣ ಆರಂಭಿಸಿದರು.
ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ ಈ ಪುಣ್ಯಭೂಮಿಗೆ ಹಾಗೂ ಕರ್ನಾಟಕ ಜನತೆಗೆ ನನ್ನ ನಮನ. ಭಾರತ ಜನನಿಯ ತನುಜಾತೆ, ಕನ್ನಡ ನಾಡಿಗೆ ಧನ್ಯವಾದ. ನಾನು ಹಿಂದಿನ ವರ್ಷ ಇಲ್ಲಿಗೆ ಬಂದಿದ್ದೆ. ಆಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುಮ್ಕಿ ಆನೆಗಳ ವಿಚಾರದಲ್ಲಿ ಚರ್ಚಿಸಿದ್ದೆವು. ಇಂದು ಅದು ನಿಜವಾಗಿದ್ದು, ಹಸ್ತಾಂತರ ನಡೆದು ಖುಷಿಯಾಗಿದೆ. ನನ್ನೊಂದಿಗೆ ರಾಜಕೀಯಕ್ಕೆ ಹೊಸದಾಗಿ ಬಂದವರಂತೆ ಸಿಎಂ ಎಂದಿಗೂ ವರ್ತಿಸಿಲ್ಲ. ನಾವು ರಾಜಕೀಯವಾಗಿ ವಿಭಿನ್ನವಾಗಿದ್ದರೂ ಜನರ ಹಿತಕ್ಕೆ ಒಗ್ಗಟ್ಟಾಗಿ ನಿಲ್ಲಬೇಕೆಂಬ ನಂಬಿಕೆಯಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಕ್ಕೆ ಧನ್ಯವಾದಗಳು. ಸಹೋದರ ರಾಜ್ಯದಂತೆ ನಮ್ಮ ಜೊತೆ ಕರ್ನಾಟಕ ನಿಂತಿದೆ. ಕುಮ್ಕಿ ಆನೆಗಳನ್ನ ನಮಗೆ ಕೊಟ್ಟಿದ್ದಕ್ಕೆ ಕರ್ನಾಟಕದ ಜನತೆಗೆ ಧನ್ಯವಾದ ಹೇಳುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿಯನ್ನ ನಾನು ತೆಗೆದುಕೊಳ್ಳುತ್ತೇನೆ. ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಾಂಧವ್ಯಕ್ಕೆ ಮೊದಲ ಹೆಜ್ಜೆ ಎಂದರು. ಇನ್ನು ಭಾಷಣದ ಕೊನೆಯಲ್ಲಿ ಜೈ ಕರ್ನಾಟಕ, ಜೈ ಆಂಧ್ರ, ಜೈ ಭಾರತ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿವರಾದ ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.