ಪಾವಗಡ : ಪುರಸಭೆ ನೌಕರರ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪುರಸಭೆ ನೌಕರರ ಪ್ರತಿಭಟನೆಗೆ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ್ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಬೆನ್ನಲ್ಲೇ ಪಾವಗಡ ಪುರಸಭೆ ಕಚೇರಿ ಮುಂದೆ ನೂರಾರು ಮಂದಿ ಪುರಸಭೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಪೌರ ಕಾರ್ಮಿಕರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮುಷ್ಕರ ಆರಂಭಿಸಿದ್ದು, ಇವರ ಪ್ರತಿಭಟನೆಗೆ ಸಾರ್ವಜನಿಕರು ಸಾಥ್ ನೀಡಿದ್ದಾರೆ.
ಇನ್ನು ಪೌರಕಾರ್ಮಿಕರ ಮುಷ್ಕರ ಹಿನ್ನೆಲೆ ಇಂದಿನಿಂದ ಪಾವಗಡ ಪಟ್ಟಣದಲ್ಲಿ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲದೇ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುವ ಪೌರ ಕಾರ್ಮಿಕರಿಗೆ 4-5 ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಪ್ರತಿಭಟನೆಯಲ್ಲಿ ಪುರಸಭೆಯ ವಾಟರ್ ಸಪ್ಲೈ ನಿರ್ವಹಣೆ ಅಧಿಕಾರಿ ಭಾಗ್ಯಮ್ಮ, ಆರೋಗ್ಯಾಧಿಕಾರಿ ಸಂಶುದ್ದೀನ್ ಹಾಗೂ ನೂರಾರು ಮಂದಿ ನೌಕರರು ಭಾಗಿಯಾಗಿದ್ದರು.