ಮೈಸೂರು : ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. "ನನಗೆ ಈಗಾಗಲೇ 75 ವರ್ಷ ವಯಸ್ಸಾಗಿದೆ, ಮುಂದಿನ ಚುನಾವಣೆಗೆ ಸ್ಪರ್ಧಿಸುವ ಆಲೋಚನೆಯಿಲ್ಲ, ಯುವಕರಿಗೆ ಅವಕಾಶ ನೀಡಲು ಈ ನಿರ್ಧಾರ ಕೈಗೊಂಡಿದ್ದೇನೆ," ಎಂದು ಕೆ ಎನ್ ರಾಜಣ್ಣ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಾಜಕೀಯ ನಿವೃತ್ತಿಯನ್ನು ಘೋಷಿಸಿದ ರಾಜಣ್ಣ ಅವರು ಇದೇ ವೇಳೆ ಸಹಕಾರಿ ಕ್ಷೇತ್ರ ಹಾಗೂ ಸಕ್ರೀಯ ರಾಜಕಾರಣದಲ್ಲಿ ಮಾತ್ರ ಮುಂದುವರಿಯುತ್ತೇನೆ ಎಂದು ತಿಳಿಸಿದರು. ಚುನಾವಣೆಗೆ ನಿಲ್ಲದೆ “ಸಹಕಾರಿ ಚಟುವಟಿಕೆಗಳಲ್ಲಿ ಇನ್ನೂ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಸಂಘಟನೆ ಹಾಗೂ ಸಹಕಾರ ಸಂಸ್ಥೆಗಳ ಅಭಿವೃದ್ದಿಗೆ ಗಮನ ಹರಿಸುತ್ತೇನೆ," ಎಂದು ಹೇಳಿದರು.
ರಾಜಣ್ಣ ಅವರ ನಿವೃತ್ತಿ ಘೋಷಣೆಗೆ ರಾಜಕೀಯ ವಲಯದಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ತಲೆಮಾರಿಗೆ ಅವಕಾಶ ಸೃಷ್ಟಿಸಲು ಅವರು ನೀಡಿರುವ ಈ ತೀರ್ಮಾನವು ಗಮನ ಸೆಳೆದಿದೆ. ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಅವರು, ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತಿದ್ದಾರೆ.