MYSORE : “ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವೇಕತನ ಎಲ್ಲಿಗೆ ಹೋಯಿತು?” ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಪ್ರಶ್ನಿಸಿದ್ದಾರೆ. ಮೈಸೂರಿನ ರೈಲ್ವೆ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನಡೆ ಈಗ ಭಿನ್ನವಾಗಿದ್ದು, "ಹಳೆಯ ಸಿದ್ದರಾಮಯ್ಯ ಈಗ ಉಳಿದಿಲ್ಲ. ಅವರು ಒಬ್ಬ ಮುತ್ಸದ್ದಿ ರಾಜಕಾರಣಿ ಆಗಿದ್ದನ್ನು ನಾವೆಲ್ಲಾ ಕಂಡಿದ್ದೇವೆ. ಆದರೆ ಈಗ ಅವರು ತಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ಅವರು ಪಾಪದ ಸುತ್ತಿಕೊಳ್ಳುತ್ತಿದೆ," ಎಂದು ಆರೋಪಿಸಿದರು.
ಸಚಿವ ಸೋಮಣ್ಣ ಅವರು ಕಾಂಗ್ರೆಸ್ ನಾಯಕರ ವಿರುದ್ಧ ತೀಚ್ರ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರದ ಆಡಳಿತ ಈಗಾಗಲೇ ಹಳಿ ತಪ್ಪಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಪೊಲೀಸ್ ಇಲಾಖೆಯ ನೈತಿಕತೆ ಕುಗ್ಗಿಸಿದ್ದು, ರಾಜ್ಯ ಸರ್ಕಾರ ಇದರಿಂದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ನಿಮ್ಮ ರಾಜಕೀಯ ಒಡಂಬಡಿಕೆ, ಗುದ್ದಾಟ, ಕೆಲವು ಅಸಹ್ಯಗಳನ್ನ ರಾಜ್ಯದ ಜನ ಗಮನಿಸುತ್ತಿದ್ದಾರೆ. 18 ವರ್ಷದ ಆರ್ಸಿಬಿ ಕನಸಿನ ಗಾಂಭೀರ್ಯತೆ ಅರಿಯಲಿಲ್ಲವೇ? ರಾಜ್ಯದ ಜನರಿಗೆ ಯಾವ ರೀತಿ ಸಹಾಯ ಮಾಡುತ್ತಿದ್ದೀರಿ. ನೀವು ಮಾಡಿರುವ ಪಾಪಗಳಿಗೆ ಯಾವ ರೀತಿ ಪ್ರಾಯಶ್ಚಿತ ಮಾಡಿಕೊಳ್ತೀರಿ? ಇನ್ನಾದರೂ ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸಚಿವ ಸೋಮಣ್ಣ ಮಾತಿನ ಚಾಟಿ ಬೀಸಿದ್ದಾರೆ.