ಕೊರಟಗೆರೆ:
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನರಿಗೆ ಬಿಸಿಲಿನ ಬೇಗೆ ಜೊತೆಗೆ ಹೆಜ್ಜೆನು ದಾಳಿ ಕೂಡ ಹೆಚ್ಚಾಗಿದೆ. ಮರಗಳಲ್ಲಿ ಕಟ್ಟಿದ್ದ ಜೇನು ನೋಣಗಳು ಬಿಸಿಲಿನ ತಾಪಮಾನಕ್ಕೆ ಏಕಾಏಕಿ ದಾಳಿ ಮಾಡ್ತಿದ್ದು, ಜೇನು ನೋಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಕೊರಟಗೆರೆ ಜನರಿಗೆ ಕಳೆದ ಒಂದೂವರೆ ತಿಂಗಳಿನಿಂದ ಜೇನು ನೊಣಗಳ ಕಾಟ ಮಿತಿಮೀರಿದೆ.
ಕೊರಟಗೆರೆ ಪಟ್ಟಣದ ಬಸ್ ನಿಲ್ದಾಣದ ಬಳಿ ಇರೋ ಅರಳಿಮರದಲ್ಲಿ ಹೆಜ್ಜೇನು ಕಟ್ಟಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿ ಮಾಡ್ತಿದ್ದಂತೆ ಮಕ್ಕಳು, ವೃದ್ಧರು ತಪ್ಪಿಸಿಕೊಳ್ಳಲು ಓಡಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಜೇನುನೋಣಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.
ಇತ್ತ ಶಿವರಾಜ್ ಎಂಬ ಪ್ರಯಾಣಿಕರ ಮೇಲೆ ಸುಮಾರು 30ಕ್ಕೂ ಹೆಚ್ಚು ಹೆಜ್ಜೇನುಗಳು ದಾಳಿ ಮಾಡಿದ್ದು, ಗಾಯಗೊಂಡ ಶಿವರಾಜ್ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಕೊರಟಗೆರೆ ಪಟ್ಟಣದ ಹಲವು ಭಾಗಗಳಲ್ಲಿ ಹೆಜ್ಜೇನು ಗೂಡು ಕಟ್ಟಿದ್ದು, ಹೆಜ್ಜೇನು ಹುಳುಗಳು ಜನರ ಮೇಲೆ ಪದೇ ಪದೇ ದಾಳಿ ಮಾಡ್ತಾ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹೆಜ್ಜೇನುಗಳನ್ನು ತೆಗೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.