ಶಿರಾ : ಮೇ.7 ರಂದು ವೃದ್ಧ ದಂಪತಿಗಳು ಶಾಸಕ ಟಿ.ಬಿ ಜಯಚಂದ್ರ ಬಳಿ ಬಂದು ತಮ್ಮ ಜಮೀನು ವಿಚಾರವಾಗಿ ಅಳಲನ್ನು ತೋಡಿಕೊಂಡಿದ್ದರು. ಈ ವೇಳೆ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದರು. ಆ ಮಾತನ್ನು ಉಳಿಸಿಕೊಂಡ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಇಂದು ಆ ವೃದ್ಧ ದಂಪತಿಗೆ ಸಾಗುವಳಿ ಚೀಟಿಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಶಿರಾ ತಾಲೂಕು ಕಳ್ಳಂಬೆಳ್ಳ ಬಳಿ ನೆಲದಿಮ್ಮನಹಳ್ಳಿ ಗ್ರಾಮದ ವೃದ್ಧ ದಂಪತಿಗಳು ಹಲವಾರು ವರ್ಷಗಳ ಹಿಂದೆ ಜಮೀನನ್ನು ಮಂಜೂರು ಮಾಡುವಂತೆ ಮನವಿಯನ್ನು ಮಾಡಿದ್ದರು. ಆದರೆ ಯಾವೊಬ್ಬ ಅಧಿಕಾರಿಯು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಅಂತ ಮೇ. 7 ರಂದು ಶಿರಾ ನಗರದಲ್ಲಿ ಶಾಸಕ ಟಿ.ಬಿ. ಜಯಚಂದ್ರರನ್ನು ಭೇಟಿ ಮಾಡಿದ್ದರು. ಈ ವೇಳೆ ಶಾಸಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಸ್ಥಳದಲ್ಲಿಯೇ ಶಾಸಕರು ತಹಶೀಲ್ದಾರ್ ಅವರಿಗೆ ಕರೆ ಮಾಡಿ ಈ ಹಿರಿಯ ಜೀವಗಳ ಸಮಸ್ಯೆಯನ್ನು ಬಗೆ ಹರಿಸುವಂತೆ ಹೇಳಿದ್ದರು. ಈಗ ಆ ಹಿರಿಯ ಜೀವಗಳಿಗೆ ಶಾಸಕರು ಸ್ವತಃ ತಮ್ಮ ಕೈಯಾರೆ ಸಾಗುವಳಿ ಚೀಟಿಯನ್ನು ನೀಡಿ. ವೃದ್ಧ ದಂಪತಿಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ.
ಸಾಗುವಳಿ ಚೀಟಿಯನ್ನು ವೃದ್ಧ ದಂಪತಿಗೆ ನೀಡಿ ಮಾತನಾಡಿದ ಅವರು, ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ 2004 ರಲ್ಲಿ ಜನರಿಗೆ ಜಮೀನು ಮಂಜೂರಾತಿ ಮಾಡಿ ತಿಳುವಳಿಕೆ ಪತ್ರವನ್ನು ಕೊಟ್ಟಿದ್ದೇವು. ಅದೇ ಸಮಯದಲ್ಲಿ ಹಣವನ್ನು ಕಟ್ಟಿ ಸಾಗುವಳಿ ಚೀಟಿ ಪಡೆಯುವಂತೆ ಸೂಚಿಸಿದ್ದೆ. ಆದರೆ ಯಾರೊಬ್ಬರು ಆ ಕೆಲಸವನ್ನು ಮಾಡಿರಲಿಲ್ಲ. ತಿಳುವಳಿಕೆ ಪತ್ರವನ್ನೆ ಹಕ್ಕು ಪತ್ರವೆಂದೇ ಪರಿಗಣಿಸಿದ್ದರು, ಅಂತಹದೊಂದೆ ಪ್ರಕರಣವನ್ನು ಈಗ ಬಗೆಹರಿಸಿದ್ದೇನೆ ಎಂದರು.