HASSAN NEWS : ಕೋಳಿ ಕದ್ದಿದ್ದನ್ನು ಪ್ರಶ್ನಿಸಿದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬನು ಮಾರಣಾಂತಿಕ ದಾಳಿ ನಡೆಸಿದ ಭಯಾನಕ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದ ಭೂಮಿಕಾ ಎಂಬವರು ಬೆಳಿಗ್ಗೆ ತಮ್ಮ ಕೋಳಿ ಕಾಣೆಯಾಗಿರುವುದನ್ನು ಗಮನಿಸಿ ಹುಡುಕಾಟ ಆರಂಭಿಸಿದ್ದರು. ಅನಂತರ ಪಕ್ಕದ ಮನೆಯೊಳಗಿಂದ ಕೋಳಿಯ ಧ್ವನಿ ಕೇಳಿದ ಹಿನ್ನೆಲೆಯಲ್ಲಿ ಜಯಮ್ಮ ಎಂಬವರು ಮನೆಗೆ ಹೋಗಿ ವಿಚಾರಿಸಿದಾಗ, ಅಲ್ಲಿ ಕೋಳಿ ಚೀಲದಲ್ಲಿಟ್ಟು ಬಂಧಿಸಲಾಗಿರುವುದು ಪತ್ತೆಯಾಯಿತು. ಕೋಳಿಯನ್ನು ಮರಳಿ ತೆಗೆದುಕೊಂಡ ಭೂಮಿಕಾ, ಬೆಳಗ್ಗೆ ವಿಷಯ ಅಂತ್ಯಗೊಳಿಸಿದರು ಎಂದು ಭಾವಿಸಿದರು. ಆದರೆ ಮಧ್ಯಾಹ್ನಕ್ಕೆ, ಜಯಮ್ಮ ಅವರ ಮಗ ಗಿರೀಶ್ ತನ್ನ ತಾಯಿ ಕಳ್ಳತ್ವದಲ್ಲಿ ಆರೋಪಿತೆಯಾದರೆಂದು ಆಕ್ರೋಶಗೊಂಡು, ಭೂಮಿಕಾ ಅವರ ಮನೆಗೆ ಬಂದು, ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಭೂಮಿಕಾರನ್ನು ತಕ್ಷಣ ಆಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರು ಈಗ ಅಪಾಯದಿಂದ ಪಾರಾಗಿದ್ದಾರೆ.
ಈ ವೇಳೆ ಗಿರೀಶ್, ಭೂಮಿಕಾ ರಕ್ಷಣೆಗೆ ಬಂದ ಮಾವ ಈರೇಶ್ ಮೇಲೂ ಹಲ್ಲೆ ನಡೆಸಿದ್ದಾರೆ. ಗ್ರಾಮದವರು ಸಹಾಯಕ್ಕೆ ಬಂದಾಗ ದಾಳಿ ನಡೆಸಿದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಈಗಾಗಲೇ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗಿರೀಶ್ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೈಕೋಸ್ವಭಾವ ಪ್ರದರ್ಶಿಸಿದ ಗಿರೀಶ್, ಭೂಮಿಕಾರ ಪತಿ ನಾಗೇಶ್ ಅವರ ಚಿಕ್ಕಪ್ಪನ ಮಗನಾಗಿದ್ದು, ಆಸ್ತಿ ವಿವಾದದ ಹಳೆಯ ವಿಚಾರವೂ ಈ ಘಟನೆಯಲ್ಲಿ ಪರೋಕ್ಷವಾಗಿ ಪ್ರಚೋದಕ ಕಾರಣವೆನಿಸಿದೆ. ಇನ್ನು ಘಟನೆ ಸಂಬಂಧಿ ಸಿದಂತೆ ಮಹಿಳೆ ಹಾಗೂ ಸಂಬಂಧಿಕರು, ದುಷ್ಕರ್ಮಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.