ಮಧುಗಿರಿ:
ಮಧುಗಿರಿ ತಾಲೂಕಿನ ದಂಡಾಧಿಕಾರಿ ಕಚೇರಿಯ ಮುಂದೆ ಜೀತ ವಿಮುಕ್ತರ ಪುನರ್ವಸತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ, ಪರಿವರ್ತನಾ ಟ್ರಸ್ಟ್, ದಲಿತ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪಾವಗಡ ಸರ್ಕಲ್ ನಿಂದ ತಾಲೂಕು ದಂಡಾಧಿಕಾರಿಗಳ ಕಚೇರಿ ವರೆಗೆ ತಮಟೆ ಜಾಥ ನಡೆಸಿ ತಾಲೂಕು ದಂಡಾಧಿಕಾರಿ ಶಿರಿನ್ ತಾಜ್ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಈ ವೇಳೆ ಮಾತನಾಡಿದ ಸೌಹಾರ್ದ ಕರ್ನಾಟಕ ರಾಜ್ಯಾಧ್ಯಕ್ಷ ಜೀವಿಕ ಮಂಜುನಾಥ್, ಮಧುಗಿರಿ ತಾಲೂಕಿನಲ್ಲಿ 110 ಕುಟುಂಬಗಳ ಅಂತ್ಯೋದಯ ಕಾರ್ಡ್ಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದ ಆ ಕುಟುಂಬಗಳ ಸಂಕಷ್ಟ ಹೇಳತೀರದಂತಾಗಿದೆ. ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಗೀತಾಭಿಮುಕರಿಗೆ ಆದ್ಯತೆ ಮೇರೆಗೆ ಭೂಮಿ ಮಂಜೂರು ಮಾಡಬೇಕು. ಅಲ್ಲದೇ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ 600 ರೂಪಾಯಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶಿರಿನ್ ತಾಜ್, ಅಂತ್ಯೋದಯ ಕಾರ್ಡ್ ರದ್ದಾಗಿರುವ ಬಗ್ಗೆ ಪರಿಶೀಲನೆಯನ್ನು ಮಾಡುವುದಾಗಿ ತಿಳಿಸಿದರು. 2017ರ ಎಸ್ಓಪಿ ವಾಪಸ್ ಪಡೆದು 2015ರ ಎಸ್ಓಪಿ ಜಾರಿಗೆ ಮನವಿ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರು ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹ ವಿಷಯವಾಗಿದೆ. ದೇಶದಲ್ಲಿ ಜೀತ ಪದ್ಧತಿ ಕಾನೂನು ಬಂದು 48 ವರ್ಷಗಳು ಕಳೆದರು ಬಲತ್ಕಾರದಿಂದ ದುಡಿಸಿಕೊಳ್ಳುವ ಪದ್ಧತಿ ಇನ್ನೂ ಅಳಿಸಲು ಸಾಧ್ಯವಾಗಿಲ್ಲ, ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜೀತದಾಳುಗಳ ತನಿಖೆ ಮಾಡಿ ಸರ್ಕಾರಕ್ಕೆ ವರದಿ ನೀಡಿ, ಆಯಾ ಗ್ರಾಮ ಪಂಚಾಯಿತಿಯ ಅನುದಾನ ರದ್ದು ಮಾಡಬೇಕೆಂದು ಕಟ್ಟೆಚ್ಚರ ನೀಡಿದ್ದಾರೆ.