ಕೊರಟಗೆರೆ:
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಗ್ರಾಮದ ಕೋಳಿ ಶೆಡ್ ನಲ್ಲಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿದ್ದು, ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ನೆಲಮಂಗಲದ ಅಗ್ನಿಪವರ್ ಗ್ಯಾಸ್ ವ್ಯವಸ್ಥಾಪಕ ರಘುನಾಥ್, ಜಮೀನು ಮಾಲೀಕ ಸೈಯದ್ ಭಾಷಾ ಸೇರಿ ಏಳು ಮಂದಿ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬುಕ್ಕಾಪಟ್ಟಣ ಗ್ರಾಮದ ಫಾತಿಮ ಬಿನ್ ಸೈಯದ್ ಜಮೀಲ್ ಬಾಷ ಎಂಬುವವರ ಜಮೀನಿನ ಕೋಳಿಶೆಡ್ನಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಕೊರಟಗೆರೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಕೊರಟಗೆರೆ ಸಿಪಿಐ ಅನಿಲ್ ಮಾರ್ಗದರ್ಶನದಲ್ಲಿ PSI ಚೇತನ್ ಕುಮಾರ್ ನೇತೃತ್ವದ ತಂಡ ಏಕಾಏಕಿ ರೇಡ್ ಮಾಡಲಾಗಿತ್ತು. ದಾಳಿ ವೇಳೆ 138 ಗ್ಯಾಸ್ ಸಿಲಿಂಡರ್ಗಳು, 2 ಎಲೆಕ್ಟ್ರಾನಿಕ್ ಸ್ಕೇಲ್, 90 ಪಿಲ್ಲಿಂಗ್ ಪೈಪ್, ಟಾಟಾ ಏಸ್ ಗಾಡಿ, ರೀಪಿಲ್ಲಿಂಗ್ ಮೋಟಾರ್, ಒಂದು ಬೈಕ್ ಅನ್ನು ಕೊರಟಗೆರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ಪ್ರಕರಣ ಸಂಬಂಧ ಬೆಂಗಳೂರು ಮೂಲದ ಭರತ್, ರಮೇಶ್, ಕುಮಾರ್, ರಘು, ನೆಲಮಂಗಲದ ರಘುನಾಥ, ಕೊರಟಗೆರೆಯ ಸೈಪುಲ್ಲಾ, ಮಾರುತಿ ಎಂಬುವವರ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ಕೊರಟಗೆರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ತಲೆಮರೆಸಿಕೊಂಡಿರೋ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.