ಕೊರಟಗೆರೆ:
ಕಮನೀಯ ಕ್ಷೇತ್ರ ಎಂದೇ ಸುಪ್ರಸಿದ್ದಿ ಪಡೆದಿರುವ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಫೆಬ್ರವರಿ 5ರಂದು ಬುಧವಾರ ವಿಜೃಂಭಣೆಯಿಂದ ಜರುಗಲಿದೆ. ಕ್ಯಾಮೇನಹಳ್ಳಿಯ ಕಮನೀಯ ಕ್ಷೇತ್ರಕ್ಕೆ 5 ವರ್ಷಗಳ ಇತಿಹಾಸ ಇದೆ. ದೇವರ ಆರ್ಶಿವಾದ ಪಡೆಯಲು ರಾಜ್ಯ ಮತ್ತು ಹೊರರಾಜ್ಯದಿಂದ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ. ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗ್ತಿದೆ. ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ವೇಳೆ ಗರುಡ ದೇವ ದೇವಾಲಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಬ್ರಹ್ಮರಥೋತ್ಸವಕ್ಕೆ ಚಾಲನೆ ಸಿಗಲಿದೆ. ಗರುಡ ದೇವನ ಆಗಮನ ಆಗುತ್ತಿದ್ದಂತೆ ಭಕ್ತರ ಜೈಕಾರ ಮುಗಿಲುಮುಟ್ಟಲಿದೆ.
ಫೆಬ್ರವರಿ 5ರಂದು ಬುಧವಾರದಿಂದ ಫೆಬ್ರವರಿ 14ರ ಶುಕ್ರವಾರದವರೆಗೆ ಸತತ 9 ದಿನಗಳ ಕಾಲ ಕಮನೀಯ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮದ ಜರುಗಲಿದೆ. ಮೊದಲ ದಿನ ಬ್ರಹ್ಮರಥೋತ್ಸವ, ನಂತರ ಪ್ರತಿದಿನವು ಮಂಟಪೋತ್ಸವ, ಅತ್ಯಾರೋಹಣ, ಹನುಮಂತೋತ್ಸವ, ಗರುಡೋತ್ಸವ, ಮಹಾಭೀಷೇಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ.
ಕ್ಯಾಮೇನಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ರಾಮಚಾರ್ ಮಾತನಾಡಿ, ರಥೋತ್ಸವದ ಅಂಗವಾಗಿ ಆಂಜನೇಯ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತೆ. ಅಲ್ಲದೇ ಹೋಮ ಹವನ ಜರುಗಲಿದ್ದು, ಅಂದು ದೇವರ ದರ್ಶನ ಮಾಡಿದರೆ ಇಷ್ಟಾರ್ಥ ಸಿದ್ದಿ ಆಗಲಿದೆ ಅನ್ನೋ ನಂಬಿಕೆ ಇದೆ ಎಂದರು.
ಕ್ಯಾಮೇನಹಳ್ಳಿ ಬ್ರಹ್ಮರಥೋತ್ಸವಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾಜಗೋಪುರ ನಿರ್ಮಾಣ ಭಕ್ತರ ಬಹುದಿನಗಳ ಕನಸಾಗಿದ್ದು, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿವರ್ಗ ಹಾಜರಿರಲಿದ್ದು, ವೇದಿಕೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಶ್ರೀಕ್ಷೇತ್ರದ ಅಭಿವೃದ್ದಿಗೆ ಪ್ರವಾಸೋಧ್ಯಮ ಮತ್ತು ಮುಜರಾಯಿ ಇಲಾಖೆಯಿಂದ ಅನುಧಾನ ನೀಡುವಂತೆ ಗೃಹಸಚಿವರಿಗೆ ಮನವಿ ಮಾಡಲಾಗುವುದು ಎಂದು ಟ್ರಸ್ಟ್ನ ನಿರ್ದೇಶಕರು ಹೇಳಿದರು.