ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಇದೀಗ ಹೊಸದಾಗಿ ಮೂವರಿಗೆ ಸೋಂಕು ದೃಢಪಟ್ಟಿದೆ. ಡಿ.ಜೆ.ಹಳ್ಳಿ, ಸಿ.ವಿ.ರಾಮನ್ ನಗರ ಹಾಗೂ ಜೈ ಭುವನೇಶ್ವರಿ ನಗರದಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮಹಿಳೆಯರು ಹಾಗೂ ಪುರುಷರೊಬ್ಬರಿಗೆ ಪಾಸಿಟಿವ್ ವರದಿಯಾಗಿದೆ.
ಈ ಮೂವರಿಗೂ ಯಾವುದೇ ರೀತಿಯ ಪ್ರಯಾಣದ ಇತಿಹಾಸ ಇಲ್ಲದೇ ಕೋವಿಡ್ ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ಹೋಂ ಐಸೋಲೇಷನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಒಟ್ಟು 47 ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಇನ್ನು ತಜ್ಞರ ಸಲಹೆಯ ಮೇರೆಗೆ ನಿತ್ಯ ಲಕ್ಷಾಂತರ ಜನರು ಓಡಾಡುವ ಮೆಟ್ರೋ ರೈಲುಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆದಿದೆ. ಸದ್ಯ ಮೆಟ್ರೋದಲ್ಲಿ ದಿನಕ್ಕೆ 8 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಎಸಿ ವ್ಯವಸ್ಥೆಯ ಕಾರಣದಿಂದಾಗಿ ಬಂದ್ ವಾತಾವರಣದಲ್ಲಿ ಸೋಂಕು ಬೇಗ ಹರಡುವ ಅಪಾಯವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಿಲ್ಲದ ಇಂಥ ಜಾಗಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಭೀತಿ ಹೆಚ್ಚು. ಈ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಬೇಕು ಎಂಬ ತಜ್ಞರ ಸಲಹೆಗಳಿಗೆ ಸಾರ್ವಜನಿಕರಿಗೂ ಸಹಮತಿ ವ್ಯಕ್ತವಾಗಿದೆ.
ಇದೇ ರೀತಿ, ಎಸಿ ಬಸ್ಗಳಲ್ಲೂ ಶೀಘ್ರದಲ್ಲೇ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬಹುದೆಂಬ ಸೂಚನೆ ಇದೆ. ಪ್ರಯಾಣಿಕರ ಸುರಕ್ಷತೆ ಕಾಪಾಡಲು ಎಲ್ಲರೂ ಮಾಸ್ಕ್ ಧರಿಸುವುದು ಅತ್ಯಾವಶ್ಯಕ ಎಂಬ ಅಭಿಪ್ರಾಯ ಆರೋಗ್ಯ ತಜ್ಞರಿಂದ ಕೇಳಿಬರುತ್ತಿದೆ.