ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಂಡಿದ್ದು, ಶಾಲೆಗಳಿಗಾಗಿ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ –
* ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಇದ್ದರೆ ಶಾಲೆಗೆ ಕಳುಹಿಸದೇ ವೈದ್ಯರ ಸಲಹೆ ಪಡೆಯಬೇಕು.
* ಸಂಪೂರ್ಣ ಗುಣಮುಖವಾದ ಬಳಿಕವೇ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಬೇಕು.
* ಶಾಲೆಗೆ ಬಂದ ನಂತರ ಮಕ್ಕಳಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರ ಗಮನಕ್ಕೆ ತಂದು ಮನೆಗೆ ಕಳುಹಿಸಬೇಕು.
* ಶಿಕ್ಷಕರು ಹಾಗೂ ಸಿಬ್ಬಂದಿಗೂ ಜ್ವರ ಅಥವಾ ಶೀತದ ಲಕ್ಷಣ ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
* ಶಾಲಾ ಆವರಣದಲ್ಲಿ ಸ್ಯಾನಿಟೈಸರ್ ಬಳಕೆ, ಕೈಗಳ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.
ಇದೇ ವೇಳೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ. ರಾಜ್ಯದ ಒಟ್ಟು ಆಕ್ಟಿವ್ ಕೇಸ್ 234 ಆಗಿದ್ದು, ಬೃಹತ್ ಸಂಖ್ಯೆಯ ಪ್ರಕರಣಗಳು ಬೆಂಗಳೂರು ನಗರದಿಂದಲೇ ವರದಿಯಾಗಿವೆ. ಬೆಂಗಳೂರು ನಗರದಲ್ಲೇ 150ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಮಹಾದೇವಪುರ, ಪೂರ್ವ ವಲಯ ಹಾಗೂ ದಕ್ಷಿಣ ವಲಯಗಳಲ್ಲಿ ಕೇಸ್ಗಳು ಹೆಚ್ಚಾಗಿವೆ. ಪೂರ್ವ ವಲಯದಲ್ಲಿ ಮಾತ್ರವೇ 30ರ ಗಡಿ ದಾಟಿದೆ. ಬಿಬಿಎಂಪಿ ಆರೋಗ್ಯ ಇಲಾಖೆಯು ಡೆಂಗ್ಯೂ ನಿಯಂತ್ರಣಕ್ಕೂ ಗಮನ ಹರಿಸುತ್ತಿದ್ದು, ಮಳೆಗಾಲದ ಹಿನ್ನಲೆಯಲ್ಲಿ ಜಾಗೃತಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ.