BELAGAVI : ಭೀಕರ ಸರಣಿ ಅಪಘಾತ | ಮೂವರು ಸಾವು

BELAGAVI NEWS : ಭೀಕರ ಸರಣಿ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿಕ್ಕೋಡಿಯ ಅಥಣಿ ಹೊರವಲಯದಲ್ಲಿ ವಿಜಯಪುರ ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದರೆ, ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕಾಪಾಡಲು ಮುನ್ನುಗ್ಗಿದ ಒಬ್ಬಾತನೇ ಇದರಲ್ಲಿ ಬಲಿಯಾಗಿದ್ದಾನೆ. ಲಾರಿ, ಪಿಕಪ್ ವಾಹನ, ಸ್ಕಾರ್ಪಿಯೋ ಹಾಗೂ ಎರ್ಟಿಗಾ ಕಾರಿನ ನಡುವೆ ಅಪಘಾತವಾಗಿದೆ. ಭೀಕರ ಸರಣಿ ಅಪಘಾತದಲ್ಲಿ ಮಹೇಶ ಗಾತಾಡೆ (30), ಶಿವಮ್ ಚೌಹಾನ್ (24) ಹಾಗೂ ಸಚಿನ ಮಾಳಿ (40) ಎಂಬವರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಇವರು ಮಹಾರಾಷ್ಟ್ರದ ಮಿರಜ್ ಹಾಗೂ ಕೊಲ್ಲಾಪುರ ಮೂಲದವರಾಗಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೊದಲಿಗೆ ಪಿಕಪ್ ವಾಹನ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ಹೊಡೆತಕ್ಕೆ ಪಿಕಪ್ ವಾಹನ ಪಲ್ಟಿಯಾಗಿದೆ. ಪಿಕಪ್ ವಾಹನದ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದಾಗ ಇದನ್ನು ನೋಡಿದ ಸ್ಕಾರ್ಪಿಯೋ ಚಾಲಕರೊಬ್ಬರು ತಕ್ಷಣವೇ ಸ್ಕಾರ್ಪಿಯೋವನ್ನು ನಿಲ್ಲಿಸಿ ಸಹಾಯಕ್ಕೆ ಇಳಿದಿದ್ದಾರೆ. ಸ್ಕಾರ್ಪಿಯೋ ಚಾಲಕ ವಾಹನ ಪಕ್ಕಕ್ಕೆ ಹಾಕಿ ರಸ್ತೆ ದಾಟುವಾಗ ಹಿಂದಿನಿಂದ ಜೋರಾಗಿ ಬಂದ ಎರ್ಟಿಗಾ ಕಾರು ಆತನಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದು ನಂತರ ಎರ್ಟಿಗಾ ಕಾರು ಲಾರಿಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಎರ್ಟಿಗಾ ಕಾರಿನಲ್ಲಿದ್ದ ಇಬ್ಬರು, ಸ್ಕಾರ್ಪಿಯೋ ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಪೊಲೀಸರು ಈ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಾಣ ಉಳಿಸಲು ಬಂದು ಪ್ರಾಣ ಕಳೆದುಕೊಂಡ ಸ್ಕಾರ್ಪಿಯೋ ಚಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Author:

...
Keerthana J

Copy Editor

prajashakthi tv

share
No Reviews