ಹೊನ್ನುಡಿಕೆ : ರೈತರು ಬೇಸಾಯದ ಜೊತೆಗೆ ಹೈನುಗಾರಿಕೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಅದೆಷ್ಟೋ ಬಡ ಕುಟುಂಬಗಳು ಇಂದಿಗೂ ಹೈನುಗಾರಿಕೆಯಿಂದ ತಮ್ಮ ಕುಟುಂಬ ನಡೆಸುತ್ತಿದ್ದಾರೆ. ಹೈನುಗಾರಿಕೆಯಿಂದ ಕೇವಲ ರೈತರು ಮಾತ್ರವಲ್ಲದೇ ಹಾಲಿನ ಏಜೆಂಟರುಗಳು ಕೂಡ ಜೀವನ ಸಾಗಿಸ್ತಾ ಇದ್ದಾರೆ. ಹಾಲನ್ನು ಸರಿಯಾದ ಟೈಂಗೆ ಡೈರಿಗೆ ತಂದು, ಹಾಲಿನ ಗುಣಮಟ್ಟವನ್ನು ಕಾಪಾಡ್ತಾ ಇದ್ದಾರೆ. ಆದರೆ ಹಾಲು ಏಜೆಂಟರುಗಳ ಮೇಲೆ ಡೈರಿಯವರು ದಬ್ಬಾಳಿಕೆ ಮಾಡುತ್ತಿದ್ದು, ಹಾಲಿನ ಏಜೆಂಟರುಗಳನ್ನು ಕೆರಳಿಸುವಂತೆ ಮಾಡಿದೆ.
ಡೈರಿಗೆ ತಂದ ಹಾಲಿನಲ್ಲಿ ಆಂಟಿ ಬಯೋಟಿಕ್ ಇದೆ ಎಂದು ಏಕಾಏಕಿ ಹಾಲನ್ನು ಹಾಕಿಸಿಕೊಳ್ಳದೇ ಹಾಟ್ಸನ್ ಆರೋಗ್ಯ ಆಗ್ರೋ ಪ್ರೈವೇಟ್ ಕಂಪನಿ ದರ್ಪ ತೋರಿದ್ದು, ಹಾಲಿನ ಏಜೆಂಟರು ಹಾಲನ್ನು ಸುರಿದು ಆಕ್ರೋಶ ಹೊರಹಾಕಿದ್ದಾರೆ. ಹೊನ್ನುಡಿಕೆ ಬಳಿ ಇರೋ ಹಾಟ್ಸನ್ ಆರೋಗ್ಯ ಆಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ದರ್ಪ ತೋರಿದ್ದು, ಹಾಲು ಹಾಕಲು ಬಂದ ಹಾಲು ಏಜೆಂಟರುಗಳಿಂದ ಹಾಲನ್ನು ಹಾಕಿಸಿಕೊಳ್ಳದೇ ವಾಪಸ್ ಕಳುಹಿಸಿದ್ದಾರೆ, ಇದರಿಂದ ರೊಚ್ಚಿಗೆದ್ದ ಹಾಲಿನ ಏಜೆಂಟರುಗಳು ಡೈರಿಯ ಮುಂದೆ ದಿಢೀರ್ ಪ್ರತಿಭಟನೆ ನಡೆಸಿ, ಹಾಲನ್ನು ಸುರಿದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಸುಮಾರು 34 ಮಂದಿ ಏಜೆಂಟರುಗಳು ದಿನಕ್ಕೆ 3 ಸಾವಿರ ಲೀಟರ್ ಹಾಲನ್ನು ಹಾಟ್ಸನ್ ಆರೋಗ್ಯ ಆಗ್ರೋ ಸಂಸ್ಥೆಗೆ ಹಾಕ್ತಿದ್ದಾರೆ, ಹಾಲಿನಲ್ಲಿ ಆಂಟಿ ಬಯೋಟಿಕ್ ಟೆಸ್ಟಿಂಗ್ ನಡೆಸಿ ಹಾಲನ್ನು ಹಾಕಿಸಿಕೊಳ್ಳುತ್ತಾರೆ. ಒಂದು ವೇಳೆ ಹಾಲಿನಲ್ಲಿ ಔಷಧಿ ಅಂಶ ಕಂಡು ಬಂದರೆ ಮೂರು ಬಾರಿ ಹೇಳಿ ಬಳಿಕ ಹಾಲನ್ನು ತೆಗೆದುಕೊಳ್ಳೊದಿಲ್ಲ. ಆದರೆ ಈಗ ಏಕಾಏಕಿ ಒಂದೇ ಟೆಸ್ಟಿಂಗ್ ನಲ್ಲಿ ಹಾಲುಬೇಡ ಅಂತ 340 ಲೀಟರ್ ಹಾಲನ್ನು ವಾಪಸ್ ಕಳಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಹಾಲು ಇಲ್ಲದ ಕಾರಣ ಟೆಸ್ಟಿಂಗ್ ಮಾಡದೇ ಹಾಲು ತಗೋತ್ತಾರೆ. ಆದರೆ ಮಳೆಗಾಲದಲ್ಲಿ ಅತಿ ಹೆಚ್ಚು ಹಾಲು ಬರುತ್ತೆ ಅಂತಾ ಹೀಗೆ ಮಾಡೋದು ಎಷ್ಟು ಸರಿ ಅಂತಾ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಇನ್ನು ಈ ವೇಳೆ ಹಾಟ್ಸನ್ಆರೋಗ್ಯ ಆಗ್ರೋ ಪ್ರೈವೇಟ್ ಕಂಪನಿಯ ಸೂಪರ್ವೈಸರ್ ಮಂಜುನಾಥ್ ಮಾತನಾಡಿ, ಈ ಸಂಸ್ಥೆಯ ಮಾಲೀಕರು ತಮಿಳುನಾಡಿನವರಾಗಿದ್ದಾರೆ. ಯಾವುದೇ ಅಧಿಕಾರಿಗಳು ನಮ್ಮ ಕರೆಯನ್ನು ಸ್ವೀಕರಿಸುವುದಿಲ್ಲ. ಬೇಕಿದ್ದರೆ ಹಾಲು ಹಾಕಿಕೊಳ್ಳಲಿ ಬೇಡವಾದರೆ, ಬೇರೆ ಕಡೆ ಸಂಸ್ಥೆಗೆ ಹೋಗಲಿ ಎಂದು ಹೇಳ್ತಾರೆ ನಾವು ಏನು ಮಾಡೋಣ ಎಂದು ಹೇಳಿದರು.
ಅದೇನೆ ಆಗಲಿ, ಟೆಸ್ಟಿಂಗ್ ಮಾಡಿದ ಮೇಲೆ ಔಷಧಿ ಅಂಶ ಕಂಡು ಬಂದರೆ ಅದನ್ನು ಒಮ್ಮೆ ಹೇಳಿ, ಬಳಿಕ ಕ್ರಮ ಕೈಗೊಳ್ಳೋದನ್ನು ಬಿಟ್ಟು ಏಕಾಏಕಿ ಹಾಲು ಹಾಕಿಸಿಕೊಳ್ಳದೇ ವಾಪಸ್ ಕಳುಹಿಸಿದ್ದು ಹೈನುಗಾರಿಕೆಯನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.