BANGALORE STAMPEDE : ಆರ್ ಸಿಬಿ ಸಂಭ್ರಮಾಚರಣೆ ಅಕ್ಷರಶಃ ಸೂತಕದ ಮನೆಯಾಗಿದೆ. 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಆರ್ಸಿಬಿ ಮುತ್ತಿಟ್ಟಿದೆ. ಕಪ್ ಗೆದ್ದ ತಂಡದ ಆಟಗಾರರಿಗೆ ಸನ್ಮಾನ ಹಾಗೂ ಸಂಭ್ರಮಾಚರಣೆ ಆಯೋಜನೆ ಮಾಡಲಾಗಿತ್ತು. ಆರ್ ಸಿಬಿ ಆಟಗಾರರನ್ನು ನೋಡಲು ಅಭಿಮಾನಿಗಳು ವಿಧಾನಸೌಧದ ರೋಡ್ನಲ್ಲಿ ಕಿಕ್ಕಿರಿದು ಸೇರಿದ್ದರು. ಇತ್ತ ಸಂಭ್ರಮಾಚರಣೆ ಆಗ್ತಾ ಇದ್ದರೆ ಇತ್ತ ಅಭಿಮಾನಿಗಳು ಕಾಲ್ತುಳಿತಕ್ಕೆ ಸಿಲುಕಿ ನಲುಗಿದ್ದರು. ಕಾಲ್ತುಳಿತ ಹೆಚ್ಚಾಗ್ತಾ ಇದ್ದಂತೆ ಅಭಿಮಾನಿಗಳು ಕೆಳಗೆ ಬಿದ್ದು, ಉಸಿರುಕಟ್ಟಿ ಸುಮಾರು 11 ಮಂದಿ ಸಾವನ್ನಪ್ಪಿದರೆ. 40ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ವೈದೇಹಿ ಹಾಗೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಬಂದವರು ಸಾವಿನ ಮನೆಗೆ ಸೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ನಿನ್ನೆ ದುರಂತ ನಡೆದ ಚಿನ್ನಸ್ವಾಮಿ ಸ್ಟೇಡಿಯಂಗೆ ಕಮಿಷನರ್ ಬಿ.ದಯಾನಂದ್, ಗೃಹ ಸಚಿವ ಪರಮೇಶ್ವರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪರಮೇಶ್ವರ್ ದುರಂತದ ಬಗ್ಗೆ ಚರ್ಚಿಸಿದರು. ಅಲ್ಲದೇ ದುರಂತದ ಬಳಿಕ ಎಚ್ಚೆತ್ತಿರೋ ಸರ್ಕಾರ ಬೃಹತ್ ಸಮಾರಂಭ, ಸಂಭ್ರಮಾಚರಣೆಗಳಿಗೆ ಹೊಸ ಎಸ್ಒಪಿ ರೂಪಿಸುವುದಾಗಿ ಸಚಿವ ಪರಮೇಶ್ವರ್ ಘೋಷಿಸಿದರು. ಅಲ್ಲದೇ ಕಾಲ್ತುಳಿತಕ್ಕೆ ಕಾರಣ ಏನಿರಬಹುದು ಎಂಬುದನ್ನ ಪತ್ತೆ ಮಾಡಲಿದ್ದೇವೆ, ತಪ್ಪುಗಳಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು, ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಆರ್ಸಿಬಿ ಕೂಡ ತಲಾ 10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ. ಇತ್ತ ಕಾಲ್ತುಳಿತ ದುರಂತ ಸಂಬಂಧ ಪತ್ರಿಕೆಯಲ್ಲಿ ಬಂದ ವರದಿಯನ್ನು ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿತ್ತು. ಇಂದು ಮಧ್ಯಾಹ್ನ ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಿ ಘಟನೆ ಬಗ್ಗೆ ವರದಿ ನೀಡುವಂತೆ ಪೀಠ ಸೂಚನೆ ನೀಡಿದ್ದು, ಜೂನ್ 10 ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ.
ಇನ್ನು ಕಾಲ್ತುಳಿತ ದುರಂತದ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿ, ಒಬ್ಬ ತಾಯಿ ಪೋಸ್ಟ್ ಮಾರ್ಟಂ ಬೇಡ, ಮಗನ ಮೃತ ದೇಹ ಕೊಡಿ ಎಂದು ಗೋಗರೆದಿದನ್ನು ನೋಡಿದರೆ ಕಣ್ಣೀರು ಬರುತ್ತೆ ಅಂತಾ ಹೇಳುತ್ತಾ ಡಿಕೆಶಿ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲದೇ ಬಿಜೆಪಿ, ಜೆಡಿಎಸ್ ಹೆಣಗಳ ಮೇಲೆ ರಾಜಕಾರಣ ಮಾಡ್ತಿದೆ ಎಂದು ಕಿಡಿಕಾರಿದರು.
ಅದೇನೆ ಆಗಲಿ 18 ವರ್ಷಗಳ ಬಳಿಕ ಕಪ್ ಗೆದ್ದ ಆರ್ ಸಿಬಿ ಅಭಿಮಾನಿಗಳ ಸಂಭ್ರಮ ಘೋರ ದುರಂತದಿಂದ ಒಂದೇ ಕ್ಷಣಕ್ಕೆ ಸೂತಕದ ಛಾಯೆ ಕವಿದಿದ್ದು ಮಾತ್ರ ದುರಂತವೇ ಸರಿ.