ಹೆಬ್ಬೂರು : ತುಮಕೂರು ಗ್ರಾಮಾಂತರ ಕ್ಷೇತ್ರದ ನೆಲಹಾಲ್ ಬಳಿ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲದೇ ಕುಟುಂಬಸ್ಥರ ಪರದಾಟದ ದುರಂತ ಮಾಸುವ ಮುನ್ನವೇ ಹೆಬ್ಬೂರು ಹೋಬಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೆಬ್ಬೂರು ಹೋಬಳಿಯ ಗಂಗೋನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀನಪ್ಪನಹಳ್ಳಿಯ ಜನತಾ ಕಾಲೋನಿಯ ಅನುಶ್ರೀ ನಿನ್ನೆ ಮೃತಪಟ್ಟಿದ್ದರು. ಮೃತರ ಅಂತ್ಯಕ್ರಿಯೆಯನ್ನು ಸರ್ವೇ ನಂಬರ್ 37ರ ಜಾಗದಲ್ಲಿ ನೆರವೇರಿಸಲು ಕುಟುಂಬಸ್ಥರು ಶವವನ್ನು ಅಂತ್ಯಕ್ತಿಯೆಯ ಜಾಗಕ್ಕೆ ತರಲಾಗಿತ್ತು. ಸಾಲದಕ್ಕೆ ಅಂತ್ಯಕ್ರಿಯೆಗಾಗಿ ಗುಂಡಿಯನ್ನು ತೋಡಿ, ಶವವನ್ನು ಗುಂಡಿಗೆ ಇಡಲಾಗಿತ್ತು. ಇನ್ನೇನು ಶವವನ್ನು ಅಂತ್ಯಸಂಸ್ಕಾರ ಮಾಡಬೇಕು ಅನ್ನುವಷ್ಟರಲ್ಲಿ ಜಮೀನು ಮಾಲೀಕರಾದ ಹನುಂತೇಗೌಡ ಇಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡೋದಿಲ್ಲ ಅಂತಾ ಗಲಾಟೆ ತೆಗೆದಿದ್ದಾರೆ.
ಇನ್ನು ಪೂರ್ವಜನರ ಕಾಲದಲ್ಲಿ ಸೀನಪ್ಪನಹಳ್ಳಿಯ ಸರ್ವೇ ನಂಬರ್ 37ರ ಜಾಗ ಸ್ಮಶಾನದ ಜಾಗವಾಗಿತ್ತು. ಅದೆಷ್ಟೋ ಮೃತದೇಹಗಳನ್ನು ಅಂತ್ಯಸಂಸ್ಕಾರವನ್ನು ನೇರವೇರಿಸಲಾಗುತ್ತಿತ್ತು. ಆದರೆ ಇದೀಗ ಈ ಜಾಗದಲ್ಲಿ ಹನುಮಂತೇಗೌಡ ಅಂತ್ಯಸಂಸ್ಕಾರ ಮಾಡಲು ಬಿಡೋದಿಲ್ಲ, ಇದು ನನ್ನ ಜಮೀನು ನಾನು ಇಲ್ಲಿ ಶವ ಹೂಳಲು ಬಿಡೋದಿಲ್ಲ ಅಂತಾ ಗಲಾಟೆ ತೆಗೆದಿದ್ದಾರೆ. ಅಲ್ಲದೇ ಸರ್ವೇ ನಂಬರ್ 37ರಲ್ಲಿ ಹನುಮಂತೇಗೌಡ ಉಳಿಮೆ ಚೀಟಿ ದೊರೆತಿದ್ದು, ಇದರ ಅನ್ವಯ ಜಮೀನು ತಮ್ಮದು ಎಂದು ತಿಳಿಸಿ ಕೋರ್ಟ್ನಿಂದ ಸ್ಟೇ ಕೂಡ ತಂದಿದ್ದಾರಂತೆ. ಹೀಗಾಗಿ ನೀವು ಅಂತ್ಯಸಂಸ್ಕಾರಕ್ಕಾಗಿ ಬೇರೆ ಜಾಗವನ್ನು ಗುರುತಿಸಿದ್ದು ಅಲ್ಲಿ ಹೋಗಿ ಅಂತ್ಯ ಸಂಸ್ಕಾರ ಮಾಡಿ ಎಂದು ಗ್ರಾಮಸ್ಥರಿಗೆ ಹನುಮಂತೇಗೌಡ ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಇಲ್ಲಿ ನಮ್ಮ ಪೂರ್ವಜರ ಕಾಲದಿಂದಲೂ ಇಲ್ಲಿಯೇ ಅಂತ್ಯಸಂಸ್ಕಾರ ಮಾಡ್ತಿದ್ದು, ನಾವು ಇಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಅಂತಾ ಪಟ್ಟು ಹಿಡಿದಿದ್ದು, ಅಂತ್ಯಸಂಸ್ಕಾರ ವಿಚಾರವಾಗಿ ಹನುಮಂತೇಗೌಡ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರುತ್ತಿದ್ದಂತೆ ಹೆಬ್ಬೂರು ಪೊಲೀಸರಾದ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ರಾಮ್ಪ್ರಸಾದ್ ಆಗಮಿಸಿ ಮನವೊಲಿಸಲು ಪ್ರಯತ್ನಿಸಿದ್ದು, ಆದರೆ ಅಂತ್ಯಸಂಸ್ಕಾರ ಮಾಡಲು ಬಿಡಲೇ ಇಲ್ಲ.
ಇನ್ನು ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಕೊನೆಗೆ ಶಾಸಕ ಸುರೇಶ್ಗೌಡ ಮಧ್ಯಪ್ರವೇಶಿಸಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಒಮ್ಮೆ ಗುಂಡಿಗೆ ಹೆಣ ಇಟ್ಟ ಮೇಲೆ ಮೇಲೆತತ್ತೋದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಅನುಕೂಲ ಮಾಡಿಕೊಡುತ್ತೇವೆ ಎಂದು ಶಾಸಕ ಸುರೇಶ್ಗೌಡ ಜಮೀನು ಮಾಲೀಕ ಹನುಂತೇಗೌಡಗೆ ಮನವೊಲಿಕೆ ಮಾಡಿದ್ದಾರೆ. ಶಾಸಕರ ಮನವೊಲಿಕೆಗೆ ಒಪ್ಪಿದ ಹನುಂತೇಗೌಡ ಅಂತ್ಯಸಂಸ್ಕಾರಕ್ಕೆ ಒಪ್ಪಿದ್ದಾರೆ. ಕೊನೆಗೆ ಶಾಸಕ ಸುರೇಶ್ಗೌಡ ಅವರೇ ಮುಂದೆ ನಿಂತು ಅಂತ್ಯಸಂಸ್ಕಾರ ನೇರವೇರಿಸಿಕೊಟ್ಟರು.
ಒಟ್ಟಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೃತ ವ್ಯಕ್ತಿಗೆ ಮುಕ್ತಿ ಕೊಡಲು ಅಲ್ಲಲ್ಲಿ ಜಾಗ ಇಲ್ಲದೇ ಪರದಾಡುವಂತಾಗಿದ್ದು, ಮುಂದಿನ ದಿನಗಳಲ್ಲಿ ಅಂತ್ಯಸಂಸ್ಕಾರದ ಜಾಗಕ್ಕೆ ಯಾವುದೇ ಅಡ್ಡಿ ಆಗದಂತೆ ಜಾಗ ನೀಡಿ ಮೃತದೇಹಕ್ಕೆ ಮುಕ್ತಿ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ.