ಬಾಗಲಕೋಟೆ : ದೇಶ ಸೇವೆಯ ಕನಸನ್ನು ಹತ್ತಿರವಿಟ್ಟಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಚಿಂಚಲಕಟ್ಟಿ ತಾಂಡಾ ಗ್ರಾಮದ ಯುವ ಯೋಧ ಉಪೇಂದ್ರ ಸೋಮನಾಥ ರಾಥೋಡ್ (24) ಅವರು ಛತ್ತೀಸ್ಗಢದಲ್ಲಿ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ.
ಮೂರು ತಿಂಗಳ ಹಿಂದಷ್ಟೆ ಅಸ್ಸಾಂ ರೈಫಲ್ಸ್ ಸೇನೆಗೆ ಸೇರಿದ್ದ ರಾಥೋಡ್ ಅವರು ಛತ್ತೀಸ್ಗಢದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ತರಬೇತಿ ವೇಳೆ ತೀವ್ರವಾದ ಹೃದಯಾಘಾತ ಸಂಭವಿಸಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮೃತ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪಾರ್ಥಿವ ಶರೀರ ನಾಳೆ ಮಧ್ಯಾಹ್ನ ತಾಲೂಕಿಗೆ ಬರಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.